ಛತ್ತೀಸ್ ಗಢ: ಕಟುಕರು ಹೊಲದಲ್ಲಿ ನವಜಾತ ಶಿಶುವನ್ನು ಎಸೆದು ಹೋದ ನಂತರ ರಾತ್ರಿಯಿಡೀ ನಾಯಿಯೊಂದು ಮಗುವಿನ ಜೊತೆ ಇದ್ದು ಕಾವಲು ಕಾದಿರುವ ಘಟನೆ ನಗರವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆ ಮುಂಗೇಲಿ ಜಿಲ್ಲೆಯ ಲೋರ್ಮಿಯ ಸರಿಸ್ತಾಲ್ ಗ್ರಾಮದಲ್ಲಿ ಮೂರು ದಿನಗಳ ಹಿಂದೆಯೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅಕ್ರಮ ಸಂಬಂಧದ ಫಲವೋ? ಅಥವಾ ಹೆಣ್ಣು ಮಗು ಎಂಬ ಕಾರಣಕ್ಕೋ ಹೊಕ್ಕಳು ಬಳ್ಳಿಯೊಂದಿಗೆ ಯಾವುದೇ ಬಟ್ಟೆ ಸಹಾ ಇಲ್ಲದೇ ನವಜಾತ ಹೆಣ್ಣು ಮಗುವನ್ನು ಗ್ರಾಮದ ಜಮೀನೊಂದರಲ್ಲಿ ಎಸೆದು ಅಲ್ಲಿಂದ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಬೀದಿನಾಯಿಯೊಂದು ಹಸುಗೂಸಿನ ಜೊತೆಗೆ ತನ್ನ ಮರಿಗಳನ್ನು ಮಲಗಿಸಿಕೊಂಡು ರಾತ್ರಿಯಿಡಿ ಚಳಿಯನ್ನು ಲೆಕ್ಕಿಸದೆ ಮಲಗಿಕೊಂಡಿತ್ತು.
ಮಾರನೇ ದಿನ ಬೆಳಿಗ್ಗೆ ಮಗು ಅಳುವ ಶಬ್ದವನ್ನು ಕೇಳಿದ ನಂತರ ಸ್ಥಳಕ್ಕೆ ಬಂದ ಗ್ರಾಮಸ್ಥರು ನಾಯಿಮರಿಗಳ ಜೊತೆ ಬಟ್ಟೆ ಸಹಾ ಇಲ್ಲದೇ ಹೊಕ್ಕುಳ ಬಳ್ಳಿಯನ್ನು ತೆಗೆಯದೆ ಇದ್ದ ಒಂದು ನವಜಾತ ಶಿಶುವನ್ನು ನೋಡಿ ದಿಗ್ಬ್ರಮೆಗೊಂಡಿದ್ದಾರೆ. ಕೂಡಲೇ ಗ್ರಾಮ ಪಂಚಾಯಿತಿಗೆ ಮಾಹಿತಿಯನ್ನು ತಿಳಿಸಿ, ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಮಗುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಅಲ್ಲಿ ಮಗುವಿನ ಆರೋಗ್ಯ ತಪಾಸಣೆ ಮಾಡಿಸಿದ್ದು ಮಗು ಅರೋಗ್ಯವಾಗಿದೆ ಎಂಬ ಮಾಹಿತಿ ಲಭಿಸಿದೆ ಹಾಗೂ ಮಗುವಿನ ಮೇಲೆ ಯಾವುದೇ ಗಾಯದ ಗುರುತು ಕಂಡುಬಂದಿಲ್ಲ ಎಂಬ ಮಾಹಿತಿ ಲಭಿಸಿದೆ.
ಸದ್ಯ ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ಕೊಡಲಾಗಿದ್ದು ಮಗುವಿಗೆ ಆಕಾಂಕ್ಷ ಎಂದು ನಾಮಕರಣ ಮಾಡಲಾಗಿದೆ. ನವಜಾತ ಹೆಣ್ಣು ಮಗುವನ್ನು ಕ್ರೂರಿಗಳ ಹಾಗೆ ಎಸೆದು ಹೋದ ಕ್ರೂರಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ನಾಯಿಮರಿಗಳ ಜೊತೆ ಇದ್ದ ಪುಟ್ಟ ಮಗುವಿನ ಫೋಟೋ ಭಾರಿ ವೈರಲ್ ಆಗಿದ್ದು ಮನುಷ್ಯರಿಗಿಂತ ನಾಯಿಯೇ ನಿಯತ್ತಿನ ಪ್ರಾಣಿ ಎಂದು ನಾಯಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಮನುಷ್ಯ ಕುಲಕ್ಕಿಂತ ಮೂಕ ಪ್ರಾಣಿಯೇ ಲೇಸು ಎಂದು ತಿಳಿಸಿದ್ದಾರೆ.