ಚಿಕ್ಕಮಗಳೂರು/ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ಇಲಾಖೆ ಟೆಸ್ಟ್ ಗೆ ಕಳುಹಿಸಿತ್ತು. ವರದಿ ಬಂದಿದ್ದು ಈ ವರ್ಷದ ಮೊದಲ ಕೆಎಫ್ಡಿ ಪ್ರಕರಣ ಪತ್ತೆಯಾಗಿದೆ. ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿ ಎದುರಾಗಿದೆ. ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಕೈಗೊಂಡಿದ್ದು ಪತ್ತೆಯಾದ ವ್ಯಕ್ತಿ ಇದ್ದ ಸ್ಥಳ ಹಾಗೂ ಸುತ್ತಮುತ್ತ ಪ್ರತಿ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ.
ಹಾಗೆಯೇ ಈ ವರ್ಷದ ಮಲೆನಾಡಿನಲ್ಲಿ ಮೊದಲ ಮಂಗನ ಕಾಯಿಲೆ ಪತ್ತೆಯಾಗಿದೆ.
ಮಂಗನ ಕಾಯಿಲೆ ಪತ್ತೆಯಾದ ಹಿನ್ನಲೆ:
1957 ನೇ ಇಸವಿಯ ಬೇಸಗೆಯಲ್ಲಿ ಶಿವಮೊಗ್ಗ ಜಿಲ್ಲೆ, ಸೊರಬ ತಾಲೂಕಿಗೆ ಸೇರಿದ ಕಾಸನೂರು ಎಂಬ ಗ್ರಾಮದಲ್ಲಿ ಹೊಸ ಕಾಯಿಲೆಯೊಂದು ಹುಟ್ಟಿಕೊಂಡಿತು. ಕಾಡಿನ ಮಂಗಗಳು ಸತ್ತು ಬೀಳುವುದರೊಂದಿಗೆ ಈ ಕಾಯಿಲೆ ಆರಂಭಗೊಳ್ಳುತ್ತಿದ್ದರಿಂದ ಹಳ್ಳಿಗರು ಈ ಕಾಯಿಲೆಗೆ “ಮಂಗನ ಕಾಯಿಲೆ” ಎಂದೇ ಕರೆದರು. ಜಗತ್ತಿನಲೆಲ್ಲೂ, ಕಾಣದ ಕಾಯಿಲೆ ಕಾಸನೂರಿನಲ್ಲಿ, ಮಾತ್ರ ಕಂಡಿರುವುದರಿಂದ ವೈದ್ಯ ವಿಜ್ಞಾನಿಗಳು ಈ ಕಾಯಿಲೆಗೆ ಕ್ಯಾಸನೂರು ಕಾಡಿನ ಕಾಯಿಲೆ ಎಂದು ನಾಮಕರಣ ಮಾಡಿದರು.
ಹೊಸ ರೋಗ ಹುಟ್ಟಿ ಎರಡು ದಶಕಗಳಾದರೂ, ಈ ಕಾಯಿಲೆ ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಹೀಗೆ ಮಲೆನಾಡಿನ ಕೆಲವೇ ಪ್ರದೇಶಕ್ಕೆ (600ಚ.ಕಿ.ಮೀ.) ಸೀಮಿತ ಗೊಂಡಿತ್ತು. ಮಾನವನ ಅರಣ್ಯ ನಾಶ ಕೃತ್ಯದಿಂದಾಗಿ, ರೋಗಪೀಡಿತ ಕೋತಿಗಳು ಹೊಸ ಹೊಸ ಕಾಡನ್ನು ಹುಡುಕುತ್ತಾ ಹೋದಂತೆ ರೋಗಪೀಡಿತ ಪ್ರದೇಶವೂ ವಿಸ್ತರಿಸುತ್ತಾ ಹೋಯಿತು. ಹೀಗಾಗಿ ಈಗ ಕ್ಯಾಸನೂರು ಕಾಡಿನ ಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ವ್ಯಾಪಿಸಿದೆ. ಆರು ಸಾವಿರ ಚದರು ಕಿಲೋ ಮೀಟರ್ ಪ್ರದೇಶವನ್ನು ಆಕ್ರಮಿಸಿರುವ ಕಾಯಿಲೆ ಪ್ರತಿವರ್ಷದ ಬೇಸಗೆಯಲ್ಲಿ ಮರುಕಳಿಸುತ್ತಿದ್ದು, ಪ್ರತಿವರ್ಷ ನೂರರಷ್ಟು ಬಲಿ ತೆಗೆದುಕೊಂಡು, ಒಂದೆರಡು ಸಾವಿರ ಜನರನ್ನು ಪೀಡಿಸುತ್ತಿದೆ.
ವೈರಸ್ ಬಂದಿರುವ ಕಾರಣ:
ಕ್ಯಾಸನೂರ ಕಾಡಿನ ಕಾಯಿಲೆಗೆ ಮುಖ್ಯ ಕಾರಣ ಒಂದು ವೈರಸ್. ಸೈಬೀರಿಯದಿಂದ ವಲಸೆ ಬಂದ ಹಕ್ಕಿಗಳು ಈ ವೈರಸ್ ಅನ್ನು ಇಲ್ಲಿಗೆ ತಂದಿದೆ ಎಂದು ವೈದ್ಯ ವಿಜ್ಞಾನಿಗಳು ಹೇಳುತ್ತಾರೆ. ಬಹುತೇಕ ಈ ವೈರಸ್ಗಳನ್ನೇ ಹೋಲುವ ವೈರಸ್ಗಳು ನಮ್ಮ ದೇಶದ ಇತರೆ ಭಾಗಗಳಲ್ಲೂ ಕಂಡಿವೆ. ಕಾಡಿನಲ್ಲಿ ವಾಸಿಸುವ ಇಲಿ, ಅಳಿಲು, ಬಾವಲಿಗಳೇ ಈ ವೈರಸ್ ಸೋಂಕುತ್ತದೆ.
ಮಾನವನಿಗೆ ಹರಡುವುದು ಹೇಗೆ:?
ಕ್ಯಾಸನೂರ ಕಾಡಿನ ಕಾಯಿಲೆ ಮೂಲತಃ ಪ್ರಾಣಿಗಳ ರೋಗ, ಕಾಡಿನ ರಕ್ತಹೀರುವ ಉಣ್ಣೆಗಳು ರೋಗಕಾರಕ ವೈರಸ್ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಅಂಟಿಸುತ್ತವೆ. ಕಾಡಿನಲ್ಲಿ ವಾಸಿಸುವ ಕಪ್ಪು ಮೂತಿಯ ಲಾಂಗರ್ ಹಾಗೂ ಬಾನೆಟ್ ಜಾತಿಯ ಮಂಗಗಳು ಸೋಂಕಿಗೆ ಬಲಿಯಾಗುತ್ತವೆ. ರೋಗಗ್ರಸ್ತ ಉಣ್ಣೆಗಳು ಮಾನವನನ್ನು ಕಚ್ಚುವುದರಿಂದ ಆಕಸ್ಮಿಕವಾಗಿ ಮಾನವನಿಗೆ ಸೋಂಕು ತಗಲುತ್ತದೆ. ಆದರೆ ಮಾನವನಿಂದ ಮಾನವನಿಗೆ ಈ ಸೋಂಕು ಹರಡುವುದಿಲ್ಲ.
ರೋಗಗ್ರಸ್ತ ಪ್ರಾಣಿಯ ರಕ್ತ ಹೀರಿದ ಉಣ್ಣೆಗಳು ರೋಗವಾಹಕಗಳಾಗಿ ಪ್ರಾಣಿಯಿಂದ ಪ್ರಾಣಿಗೆ ರೋಗ ತಗಲಿಸುವ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲ. ರೋಗಾಣುಯುಕ್ತ ಉಣ್ಣೆಗಳು ಇಡುವ ಮೊಟ್ಟೆ ಮತ್ತು ಮರಿಗಳೂ ಸಹ ವೈರಸ್ ಸಂತತಿಯನ್ನು ಮುಂದುವರೆಸುತ್ತವೆ.
ಯಾವ ತಿಂಗಳುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?:
ಕ್ಯಾಸನೂರು ಕಾಡಿನ ಕಾಯಿಲೆ ಪೀಡುಗಾಗಿ ಸ್ಫೋಟಿಸುವುದು ಬೇಸಿಗೆ ದಿನಗಳಲ್ಲಿ. ಜನವರಿಯಿಂದ ಜೂನ್ ತಿಂಗಳವರೆಗೆ ಉಣ್ಣೆಗಳ ಸಂತತಿ ವಿಪರೀತವಾಗಿ ಹೆಚ್ಚಾಗಿರುತ್ತದೆ. ಅಲ್ಲದೆ. ರೈತರು ಕಾಡಿಗೆ ಸೌದೆಗೆ, ಜಾನುವಾರುಗಳ ಮೇವಿಗೆ ಹೋಗುವುದರಿಂದ ಸಹ ಇದು ಹರಡುತ್ತದೆ. ಮಂಗಗಳು ಸತ್ತು ಬೀಳಲಾರಂಭಿಸಿದಾಗ ಮಂಗನ ಮೈಮೇಲೆ ನೆಲಸಿದ್ದ ಉಣ್ಣೆಗಳು ಹೊರಬಿದ್ದು ಕಾಡಿಗೆ ಬಂದ ಮಾನವನನ್ನು ಕಚ್ಚುವ ಸಂಭವ ಬೇಸಗೆಯಲ್ಲಿ ಹೆಚ್ಚಾಗಿರುತ್ತದೆ.
ಅರಣ್ಯಕ್ಕೆ ಭೇಟಿ ನೀಡುವ ಕೃಷಿಕ ಗಂಡಸರೇ ಹೆಚ್ಚಾಗಿ ಈ ಕಾಯಿಲೆಗೆ ತುತ್ತಾಗುತ್ತಾರೆ. ಕಾಡಿಗೆ ಹೋದ ಜಾನುವಾರುಗಳ ಮೇಲೆ ಸವಾರಿ ಮಾಡಿಕೊಂಡ ಊರಿಗೆ ಬಂದ ಉಣ್ಣೆಗಳಿಂದ ಊರಿನ ಇತರರಿಗೂ ಕಾಯಿಲೆ ತಗಲುವ ಸಾಧ್ಯತೆಗಳು ಇರುತ್ತದೆ.
ರೋಗದ ಲಕ್ಷಣಗಳು:
ಉಣ್ಣೆಗಳ ಕಡಿತದಿಂದ ವೈರಸ್ಗಳು ದೇಹ ಸೇರಿದ ಒಂದು ವಾರದ ನಂತರ ರೋಗದ ಲಕ್ಷಣಗಳು ಪ್ರಕಟವಾಗುತ್ತದೆ. ವಿಪರೀತ, ಜ್ವರ, ಅಸಾಧ್ಯ ಮೈ-ಕೈ ತಲೆನೋವು, ನರದೌರ್ಬಲ್ಯ, ಆಯಾಸ ಉಂಟಾಗುವುದಲ್ಲದೆ ಬಾಯಿ, ವಸಡು ಮೂಗು ಹಾಗೂ ಕರುಳಿನಲ್ಲಿ ರಕ್ತಸ್ರಾವವಾಗುವುದು ಮೆದುಳಿನ ಉರಿಯೂತದಿಂದಾಗಿ ಮಂಪರು ಕವಿಯುವುದು, ಪುಜ್ಞೆ ತಪ್ಪುವುದು ಹಾಗೂ ಲಕ್ವಾ ಮುಂತಾದ ತೊಂದರೆಗಳೂ ಕಾಡಬಹುದು. ಹದಿನೈದು ಇಪ್ಪತ್ತು ದಿನಗಳವರೆಗೆ ರೋಗಿಯ ಸ್ಥಿತಿ ಗಂಭೀರವಾಗಿರುವುದಾದರೂ, ಶೇಕಡಾ ೯೦ ರಷ್ಟು ರೋಗಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಾರೆ.
ರೋಗ ಹರಡದಂತೆ ತಡೆಗಟ್ಟುವುದು ಹೇಗೆ?;
▪️ ಮಂಗಗಳು ಸತ್ತು ಬೀಳುತ್ತಿರುವುದು ಗೊತ್ತಾದ ತಕ್ಷಣ ಆ ಪ್ರದೇಶದ ಕಾಡಿಗೆ ಹೆಲಿಕ್ಯಾಪ್ಟರ್ ಮೂಲಕ ಉಣ್ಣೆ ನಾಶಕ ಔಷಧಿ ಸಿಂಪಡಿಸಬೇಕು.
▪️ ಕಾಯಿಲೆ ಆರಂಭಗೊಂಡಾಗ ಕೃಷಿಕರು ಕಾಡಿಗೆ ಹೋಗುವುದನ್ನು ನಿಲ್ಲಿಸಿ, ಅನಿವಾರ್ಯವಾಗಿ ಕಾಡಿಗೆ ಹೋಗಲೇಬೇಕಾದರೆ ಮೈತುಂಬಾ ಬಟ್ಟೆ ಕಾಲಿಗೆ ಬೂಟು, ಕೈಗೆ ಗ್ಲೌಸ್, ತಲೆಗೆ ಟೋಪಿ ಧರಿಸಿಕೊಳ್ಳಬೇಕು.
▪️ ಜಾನುವಾರುಗಳ ಮೈಗೆ ಉಣ್ಣೆ ನಾಶಕ ಪುಡಿ ಲೇಪಿಸಿಕೊಳ್ಳಬೇಕು. ಕಾಡಿನಲ್ಲಿ ಕೂರುವುದು, ಮಲಗುವುದು, ಅನಾವಶ್ಯಕ ತಿರುಗಾಡುವುದು ನಿಲ್ಲಿಸಬೇಕು.
▪️ ಕಾಡಿನಿಂದ ಹಿಂದಿರುಗಿದ ಬಂದ ತಕ್ಷಣ ಸ್ನಾನ ಮಾಡಬೇಕು. ಜಾನುವಾರುಗಳ ಮೈಗೆ ಹತ್ತಿದ ಉಣ್ಣೆಗಳನ್ನು ಕಿತ್ತೆಸೆಯಬೇಕು.
ಮುಂಜಾಗ್ರತಾ ಕ್ರಮವಾಗಿ ಜಾಗೃತಿ ವಹಿಸಿದ್ದಲ್ಲಿ ಮಂಗನ ಕಾಯಿಲೆ ಹರಡದಂತೆ ತಡೆಗಟ್ಪಬಹುದಾಗಿದೆ.