ನವದೆಹಲಿ: ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಿದ್ದಕ್ಕೆ ಪಾಕಿಸ್ತಾನದ ಪರ ಘೋಷಣೆಯನ್ನು ಕೂಗಿ, ವಿಜಯೋತ್ಸವವನ್ನು ಆಚರಿಸಿದ ಮೂವರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮೂವರು ಕೂಡ ಕಾಶ್ಮೀರಿ ವಿದ್ಯಾರ್ಥಿಗಳಾಗಿದ್ದು, ಆಗ್ರಾದ ರಾಜಾ ಬಲ್ವಂತ್ ಸಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರು, ಆರೋಪಿಗಳನ್ನು ತೃತೀಯ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳಾದ ಅರ್ಷಿದ್ ಯೂಸುಫ್, ಇನಾಯತ್ ಶೇಕ್ ಹಾಗೂ ನಾಲ್ಕನೇ ವರ್ಷದ ವಿದ್ಯಾರ್ಥಿ ಶೋಕತ್ ಅಹ್ಮದ್ ಗನೈ ಎಂದು ಗುರುತಿಸಲಾಗಿದೆ.
ಈಗಾಗಲೇ ಕಾಲೇಜು ಆಡಳಿತ ಮಂಡಳಿ ಮೂವರನ್ನು ಅಮಾನತು ಮಾಡಿದ್ದು ಭಾರತದ ವಿರುದ್ಧ ಪಾಕಿಸ್ತಾನ ಗೆದ್ದ ಬಳಿಕ ಪಾಕ್ ಪರವಾಗಿ ಆರೋಪಿಗಳು ಸ್ಟೇಟಸ್ ಹಾಕಿ ದೇಶದ್ರೋಹದ ಕೃತ್ಯವನ್ನು ಎಸಗಿದ್ದಾರೆ. ಇಷ್ಟೇ ಅಲ್ಲದೇ ಇನ್ನು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬರೇಲಿಯಲ್ಲಿ ಮೂವರು ಹಾಗೂ ಲಖನೌದಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಾಗೂ 505 (1) (ಬಿ) (ಯಾವುದೇ ಹೇಳಿಕೆ/ವದಂತಿಯನ್ನು ಮಾಡಿದವರು/ಪ್ರಕಟಿಸುವವರು/ಪ್ರಸರಣ ಮಾಡುವುದು /ವರದಿ) ಮತ್ತು ಐಟಿ ಕಾಯಿದೆ 2008ರ ವಿಭಾಗ 66ಎಫ್ (ಸೈಬರ್ ಭಯೋತ್ಪಾದನೆಗೆ ಶಿಕ್ಷೆ) ಅಡಿಯಲ್ಲಿ ಎಫ್ಐಆರ್ ನನ್ನು ದಾಖಲಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.