ಚಾಮರಾಜನಗರ: ತಾಲ್ಲೂಕಿನ ಬೂದಿಪಡಗ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಗ್ರಾಪಂ ಸದಸ್ಯರೊಬ್ಬರ ಕಳ್ಳಬೇಟೆ ಬಯಲಾಗಿದ್ದು, ಅಪಾರ ಪ್ರಮಾಣದ ಸ್ಫೋಟಕಗಳು, ಆನೆಯ ದಂತ, ಹುಲಿ ಹಲ್ಲನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮದ ರಂಗಸ್ವಾಮಿ (45) ಎಂಬವರ ಮನೆ ಮೇಲೆ ತಮಿಳುನಾಡು ಅರಣ್ಯ ಇಲಾಖೆ ನೀಡಿದ ಮಾಹಿತಿಯ ಮೇರೆಗೆ ಪುಣಜನೂರು ವಲಯ ಅರಣ್ಯಾಧಿಕಾರಿ ಕಾಂತರಾಜು ಮತ್ತು ಕೆ.ಗುಡಿ ಆರ್.ಎಫ್.ಒ ಶಾಂತಪ್ಪ ಪೂಜಾರ್ ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ.
ಈ ವೇಳೆ ದಂತದ ಚೂರುಗಳು, ತಲಾ ಒಂದು ಚಿರತೆ ಮತ್ತು ಹುಲಿ ಹಲ್ಲು, 5-6 ಜಿಂಕೆಯ ಕೊಂಬುಗಳು, ಅಪಾರ ಪ್ರಮಾಣದ ಉರುಳು, 4-5 ನಾಡ ಬಂದೂಕಿಗೆ ಬಳಸುವ ಟ್ರಿಗರ್ ಗಳು ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ.
ರಂಗಸ್ವಾಮಿ ಪುಣಜನೂರು ಗ್ರಾಪಂನ ಹಾಲಿ ಸದಸ್ಯನಾಗಿದ್ದು, ಮನೆ ಮೇಲೆ ದಾಳಿ ನಡೆದ ವಿಚಾರ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.