ಬೆಂಗಳೂರು: ನಾಡಿನಾದ್ಯಂತ ಇಂದು ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜರುಗುತ್ತಿದೆ.
ಹೆಣ್ಣು ಮಕ್ಕಳು ಲಗುಬಗೆಯಿಂದ ಬೆಳಗ್ಗೆಯೇ ಬೇಗನೆ ಎದ್ದು ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ, ಮನೆ ಮುಂದೆ ರಂಗೋಲಿ, ತೋರಣ ಹಾಕಿ ಹೊಸ ಬಟ್ಟೆ, ಆಭರಣವನ್ನು ತೊಟ್ಟು ದೇವಿಯ ಪೂಜೆಯನ್ನು ನಡೆಸುತ್ತಿದ್ದಾರೆ.
ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೂ-ಹಣ್ಣುಗಳ ಮಾರಾಟ, ಖರೀದಿ ಭರಾಟೆ ಹೆಚ್ಚಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಪ್ರಸಿದ್ಧ ದೇವರಾಜ ಮಾರುಕಟ್ಟೆಯನ್ನು ಜಿ.ಕೆ.ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ದೇವಸ್ಥಾನಗಳು ಬಾಗಿಲು ತೆರೆದಿಲ್ಲ. ಜನರು ಸಾಧ್ಯವಾದಷ್ಟು ಮನೆಗಳಲ್ಲಿಯೇ ತಮ್ಮ ತಮ್ಮ ಇಷ್ಟಾನುಸಾರ ದೇವಿಯ ಪೂಜೆ, ವ್ರತ, ಭಜನೆಯನ್ನು ಮಾಡುತ್ತಿದ್ದಾರೆ.
ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರ ಮಹಾಲಕ್ಷ್ಮಿ ಹಿಂದೂ ಜನರ ಪಾಲಿಗೆ ಅತ್ಯಂತ ಪವಿತ್ರ ಮತ್ತು ಮುಖ್ಯವಾದ ಹಬ್ಬವಾಗಿದೆ. ಕ್ಷೀರ ಸಮುದ್ರ ಸಂಭವೆ ಮಹಾಲಕ್ಷ್ಮಿ ನಿತ್ಯ ಶುದ್ಧಳು, ನಿತ್ಯ ಸಿದ್ದಳು. ಸೃಷ್ಟಿಯ ಎಲ್ಲಾ ಸುವಸ್ತುಗಳಲ್ಲಿ ನೆಲೆಸಿರುವಳು. ಜಗನ್ಮಾತೆಯು ಸರ್ವರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.