ಪುತ್ತೂರು : ಮೈಸೂರಿನಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸಿರುವುದು ರಾಜ್ಯ ಸರ್ಕಾರದಲ್ಲಿರುವಂತಹ ಕೆಲವು ತಾಲಿಬಾನ್ ಪ್ರೇರಿತ ಅಧಿಕಾರಿಗಳು ಮಾಡುವ ಕೆಲಸ ಎಂದು ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ಆರೋಪ ಮಾಡಿದ್ದಾರೆ.
ಪುತ್ತೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಶರಣ್ ರವರು ನಮ್ಮ ರಾಜ್ಯದಲ್ಲಿ ತಾಲೀಬಾನ್ ಗಳಿಂದ ಪ್ರೇರಿತ ಅಧಿಕಾರಿಗಳಿಂದ ದೇವಸ್ಥಾನಗಳನ್ನು ಕೆಡವುವಂತಹ ಕೆಲಸವನ್ನು ಮಾಡುತ್ತಿದ್ದಾರೆ, ಅಂತಹ ಅಧಿಕಾರಿಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಮೈಸೂರಿನಲ್ಲಿ ತೆರುವುಗೊಳಿಸಿದಂತಹ ದೇವಾಲಯವನ್ನು ಪುನಃ ನಿರ್ಮಾಣ ಮಾಡಬೇಕು, ತೆರುವುಗೊಳಿಸಲು ನಿರ್ಧಾರ ಮಾಡಿರುವಂತಹ ದೇವಾಲಯಗಳ ಪಟ್ಟಿಯನ್ನು ಕೂಡಲೇ ಹಿಂಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ದಕ್ಷಿಣಕನ್ನಡ, ಉಡುಪಿ, ಜಿಲ್ಲೆಯ ಪ್ರತೀ ತಾಲ್ಲೂಕು ಕೇಂದ್ರಗಳಲ್ಲಿಯೂ ರಾಜ್ಯ ಸರ್ಕಾರದ ವಿರುದ್ಧ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ದ ನೇತೃತ್ವದಲ್ಲಿ ಸೆಪ್ಟೆಂಬರ್ 16 ರಂದು ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.