ಹಾವೇರಿ: ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶವನ್ನು ಕಳುಹಿಸಿ ಆಕೆಯನ್ನು ಪೀಡಿಸುತ್ತಿದ್ದ ಶಿಕ್ಷಕನ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಈ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿ ನಡೆದಿದ್ದು ಬುಧವಾರ ಪೋಷಕರು ಆಕ್ರೋಶಗೊಂಡು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ದೇವರಗುಡ್ಡದಲ್ಲಿರುವ ಹೈಸ್ಕೂಲ್ ನ ಶಿಕ್ಷಕ ಮಲ್ಲಪ್ಪ ತಳವಾರ ಎಂಬಾತ ತನ್ನ ಶಾಲೆಯ ವಿದ್ಯಾರ್ಥಿನಿಯ ಮೊಬೈಲ್ ನಂಬರ್ ನನ್ನು ಆನ್ ಲೈನ್ ತರಗತಿಯ ನೆಪದಲ್ಲಿ ತೆಗೆದುಕೊಂಡಿದ್ದ. ಆನ್ ಲೈನ್ ನಲ್ಲಿ ಪಾಠ ಮಾಡುವ ನೆಪವೊಡ್ಡಿ ಪ್ರತಿದಿನ ಆ ವಿದ್ಯಾರ್ಥಿನಿಯ ಜೊತೆ ಅಸಭ್ಯ ಸಂದೇಶವನ್ನು ರವಾನಿಸುತ್ತಿದ್ದ. ಪ್ರತಿನಿತ್ಯ ಆ ವಿದ್ಯಾರ್ಥಿನಿಗೆ ಕಿಸ್ ಕೊಡು ಎಂದು ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆಯ ನಂತರ ವಿಷಯ ತಿಳಿದ ಪೋಷಕರು ಮತ್ತು ಗ್ರಾಮಸ್ಥರು ಕೂಡಲೇ ವಿದ್ಯಾರ್ಥಿನಿಯ ಜೊತೆ ಅನುಚಿತ ವರ್ತನೆ ತೋರಿಸುತ್ತಿದ್ದ ಶಿಕ್ಷಕನನ್ನು. ಕೂಡಲೇ ಬಂಧಿಸಬೇಕು ಇಲ್ಲವೇ ಅವರನ್ನು ಕೆಲಸದಿಂದ ಅಮಾನತುಗೊಳಿಸಬೇಕು ಎಂದು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ನೆಡೆಸಿದ್ದಾರೆ.
ಸದ್ಯ ಆ ಕಿರಾತಕ ಶಿಕ್ಷಕ ಕಳುಹಿಸಿದ್ದ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕೂಡಲೇ ಆತನನ್ನು ಬಂಧಿಸುವಂತೆ ಅಗ್ರಹಿಸಿದ್ದಾರೆ. ರಾಣೆಬೆನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.