ಬೆಂಗಳೂರು: ಮೀಲಾದುನ್ನಬಿ ಆಚರಣೆಯ ರ್ಯಾಲಿಯ ವೀಡಿಯೊ ಒಂದನ್ನು ಟ್ವಿಟರ್ ನಲ್ಲಿ ಹಾಕಿ ಪ್ರಚೋದನಕಾರಿ ಶೀರ್ಷಿಕೆ ನೀಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಾಮಾಜಿಕ ಜಾಲತಾಣದಾದ್ಯಂತ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಕೆಲವರು ಈ ಟ್ವೀಟ್ ಅನ್ನು ಬೆಂಬಲಿಸಿ ಪ್ರತಿಕ್ರಿಯಿಸಿದರೆ, ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿದಂತೆ ಹಲವರು ಸೂಲಿಬೆಲೆ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋದಲ್ಲಿ ಒಂದು ಕಡೆ ಸಣ್ಣ ಮಕ್ಕಳು ಹಸಿರು ಧ್ವಜದೊಂದಿಗೆ ಮೀಲಾದುನ್ನಬಿ ಮೆರವಣಿಗೆ ಸಾಗುವ ದೃಶ್ಯವಿದ್ದು, ಜೊತೆಗೆ ಪಕ್ಕದಲ್ಲೇ ಬಾಲಕನೊಬ್ಬ ಕೇಸರಿ ಧ್ವಜ ಹಿಡಿದು ಸೈಕಲ್ ನಲ್ಲಿ ಸಾಗುವ ದೃಶ್ಯ ವೀಡಿಯೋದಲ್ಲಿ ಕಾಣಿಸುತ್ತಿದೆ.
ಈ ವೀಡಿಯೋಗೆ ”ಕುರಿಗಳು ಹಿಂಡಾಗಿ ನಡೆಯುವಾಗ ಯಾವುದೇ ಭಯ ಇಲ್ಲದೆ, ಸಿಂಹ ಏಕಾಂಗಿಯಾಗಿಯೇ ಹೆಜ್ಜೆ ಹಾಕುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ಟ್ವಟರ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವ್ಯಾಪಕವಾಗಿ ಸಾಮಾಜಿಕಜಾಲತಾಣದಲ್ಲಿ ಹರಿದಾಡಿದ್ದು ಸೂಲಿಬೆಲೆಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ”ಮುಗ್ಧ ಮಕ್ಕಳನ್ನು ಪ್ರಚೋದನೆಗೆ ಬಳಸಬಾರದು. ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ? ನೀವು ಒಬ್ಬ ಐಕಾನ್, ದಯವಿಟ್ಟು ಧನಾತ್ಮಕ ಪದಗಳನ್ನೇ ಹಾಕಿ” ಎಂದು ಟ್ವೀಟ್ ಗೆ ಪ್ರತಿಕ್ರಿಯಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ