ಉಡುಪಿ: ಯುವಕನೋರ್ವ ಯುವತಿಗೆ ಚೂರಿಯಿಂದ ಇರಿದು, ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಸಂತೆಕಟ್ಟೆ ಸಮೀಪದ ರೋಬೋಸಾಫ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಆ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಶ್ರೀ ವಿಠಲ ಭಂಡಾರಿ (28) ಚಿಕಿತ್ಸೆಗೆ ಸ್ಪಂದಿಸದೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಸಂತೆಕಟ್ಟೆಯ ರೋಬೊ ಸಾಫ್ಟ್ ಕಂಪನಿ ಎದುರು ಸೌಮ್ಯಶ್ರೀ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಹಿಂದಿನಿoದ ಬೈಕ್ ನಲ್ಲಿ ಬಂದ ಸಂದೇಶ್ ಸೌಮ್ಯಶ್ರೀ ಜೊತೆ ಮಾತುಕತೆ ನಡೆಸಿದ್ದಾನೆ, ನಂತರ ಏಕಾಏಕಿ ಯುವತಿಗೆ ಜಾಕುವಿನಿಂದ ಇರಿದಿದ್ದಾನೆ. ಬಳಿಕ ತಾನೂ ಕುತ್ತಿಗೆಗೆ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾಗಿ ಮಾಹಿತಿಯು ಲಭ್ಯವಾಗಿದೆ.
ಯುವಕ ಸಂದೇಶ್ ಕುಲಾಲ್ ತೀವ್ರ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ. ಮೇಲ್ನೋಟಕ್ಕೆ ಈ ಘಟನೆ ಪ್ರೇಮ ವೈಫಲ್ಯವೇ ಈ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆಯನ್ನು ವ್ಯಕ್ತ ಪಡಿಸಿದ್ದಾರೆ.
ಸೌಮ್ಯಶ್ರೀ ಮತ್ತು ಸಂದೇಶ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಸೌಮ್ಯಶ್ರೀಗೆ ಬೇರೆಯವರೊಂದಿಗೆ ನಿಶ್ಚಿತಾರ್ಥ ಆಗಿತ್ತು. ಇದರಿಂದ ಕುಪಿತಗೊಂಡಿದ್ದ ಸಂದೇಶ್ ಸೌಮ್ಯಶ್ರೀ ಜೊತೆಗೆ ಜಗಳವನ್ನು ಮಾಡಿಕೊಂಡಿದ್ದ ಎನ್ನಲಾಗಿದೆ.