ಲಖನೌ: ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ನೀರಜ್ ಚೋಪ್ರಾ ಜಾವೇಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನಂತರ ಅವರ ಕೋಚ್ ನಸೀಮ್ ಅಹ್ಮದ್ ಗೆ ನಿರಂತರ ಕರೆಗಳು ಬರತೊಡಗಿರುವುದು ಒಂದೆಡೆಯಾದರೆ ಕ್ರೀಡಾ ಶಾಲೆಗಳಲ್ಲಿ ತರಬೇತಿಗಾಗಿ ಅರ್ಜಿಗಳ ಮಹಾಪೂರವೇ ಹರಿದುಬರತೊಡಗಿವೆ.
ನೀರಜ್ ಚೋಪ್ರಾ ಅವರ ತರಬೇತುದಾರ ನಸೀಮ್ ಅಹ್ಮದ್ ಗೆ ಪೋಷಕರು ಕರೆ ಮಾಡುತ್ತಿದ್ದು, ತಮ್ಮ ಮಕ್ಕಳನ್ನು ತರಬೇತಿಗೆ ಹೇಗೆ ನೋಂದಣಿ ಮಾಡಿಸಬೇಕೆಂದು ಮಾಹಿತಿಯನ್ನು ಪಡೆಯುತ್ತಿದ್ದಾರೆ.
“ನೀರಜ್ ಚೋಪ್ರಾ ಫೈನಲ್ಸ್ ಗೆ ಆಯ್ಕೆಯಾಗುತ್ತಿದ್ದಂತೆಯೇ ಕಳೆದ ವಾರ 100 ಮನವಿಗಳು ಬಂದಿದೆ. ಚೋಪ್ರಾ ಚಿನ್ನದ ಪದಕ ಗೆದ್ದ ಬಳಿಕ ಈ ಮನವಿಗಳು ಇನ್ನೂ ಹೆಚ್ಚಾಗಿವೆ. ಇಂದು ಬೆಳಿಗ್ಗೆ ಪೋಷಕರಿಂದ 50 ಕರೆಗಳು ಬಂದಿದ್ದವು, ಈ ಪೈಕಿ ಬಹುತೇಕ ಮಂದಿ ಪೋಷಕರು ತಮ್ಮ ಮಕ್ಕಳನ್ನು ಜಾವೇಲಿನ್ ಕ್ರೀಡೆಗೆ ತರಬೇತಿ ಕೊಡಿಸಲು ಆಸಕ್ತಿ ಹೊಂದಿದ್ದರು, ಇನ್ನೂ ಕೆಲವರು ತಮ್ಮ ಮಕ್ಕಳನ್ನು ಯಾವುದೇ ರೀತಿಯ ಕ್ರೀಡೆಯಲ್ಲಿ ತರಬೇತಿ ಕೊಡಿಸಲು ಆಸಕ್ತಿ ಹೊಂದಿದ್ದವರಾಗಿದ್ದಾರೆ ಈ ಪೈಕಿ ಬಹುತೇಕ ಮಂದಿ ಗ್ರಾಮೀಣ ಭಾಗದವರಾಗಿದ್ದಾರೆ.ಚೋಪ್ರಾ ಚಿನ್ನದ ಪದಕ ಗೆದ್ದ ನಂತರ ಜನತೆಯಲ್ಲಿ ಅಥ್ಲೆಟಿಕ್ಸ್ ನ ಉತ್ಸಾಹ, ಆಸಕ್ತಿ ಹೆಚ್ಚಿದೆ” ಎಂದು ಹರಿಯಾಣದ ಪಂಚಕುಲ ಕ್ರೀಡಾಂಗಣದಲ್ಲಿ ಚೋಪ್ರಾ ತರಬೇತುದಾರರಾಗಿದ್ದ ತರಬೇತುದಾರ ನಸೀಮ್ ಅಹ್ಮದ್ ರವರು ಹೇಳಿದ್ದಾರೆ.
ಲಖನೌ ನ ಕೆಡಿ ಸಿಂಗ್ ಬಾಬು ಕ್ರೀಡಾಂಗಣದ ಅಥ್ಲೆಟಿಕ್ಸ್ ತರಬೇತಿ ಕೇಂದ್ರ, ಜಲಂಧರ್ ನ ಸುರ್ಜಿತ್ ಹಾಕಿ ಅಕಾಡೆಮಿ, ಗ್ವಾಲಿಯರ್ ನ ಮಧ್ಯಪ್ರದೇಶದ ಮಹಿಳಾ ಹಾಕಿ ಅಕಾಡೆಮಿ, ಅಜ್ಮೀರ್ ನ ಮಹಿಳಾ ಹಾಕಿ ಅಕಾಡೆಮಿ, ಜಾರ್ಖಂಡ್ ನ ಸಿಮ್ದೆಗಾ ಹಾಕಿ ತರಬೇತಿ ಕೇಂದ್ರದಲ್ಲಿಯೂ ಇದೇ ಮಾದರಿಯ ಪರಿಸ್ಥಿತಿಯು ನಿರ್ಮಾಣವಾಗಿದೆ.
ಟೋಕಿಯೋ ಒಲಂಪಿಕ್ಸ್ ಬಳಿಕ ಕುಸ್ತಿ ಅಖಾಡಗಳಲ್ಲಿಯೂ ನೋಂದಣಿಯ ಸಂಖ್ಯೆ ಹೆಚ್ಚಳವಾಗತೊಡಗಿದೆ. ಭಾರತೀಯರು ಶೂಟಿಂಗ್, ಆರ್ಚರಿ ವಿಭಾಗದಲ್ಲಿ ಪದಕ ಗೆಲ್ಲದೇ ಇದ್ದರೂ ಈ ಕ್ರೀಡೆಗಳಲ್ಲಿ ತರಬೇತಿ ಪಡೆಯುವುದಕ್ಕೆ ನೋಂದಣಿ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗತೊಡಗಿದೆ.
ಲಖನೌ ಅಥ್ಲೆಟಿಕ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿ ವಿಆರ್ ವರುಣ್ ಈ ವಿಷಯದ ಬಗ್ಗೆ ಮಾತನಾಡಿದ್ದು, ಒಲಂಪಿಕ್ಸ್ ನ ಬಳಿಕ ನನ್ನ ಫೋನ್ಗೆ ನಿರಂತರವಾಗಿ ಕರೆ ಬರತೊಡಗಿದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಅಥ್ಲೀಟ್ ಗಳನ್ನಾಗಿ ಮಾಡಬಯಸುತ್ತಿದ್ದಾರೆ. ಭಾರತೀಯ ಅಥ್ಲೆಟಿಕ್ಸ್ಗೆ ಇದು ಉತ್ತಮ ರೀತಿಯ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.