ಸಂಸದ ಪ್ರತಾಪ್ ಸಿಂಹ ಅವರ ಕಾರು ಅಪಘಾತಗೊಂಡಿದೆ ಎಂಬ ಸುದ್ದಿಗಳು ರಾಜ್ಯ ಮಟ್ಟದ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಬೆನ್ನಲ್ಲೇ ಸ್ವತಃ ಪ್ರತಾಪ್ ಸಿಂಹ ಅವರ ಫೇಸ್ಬುಕ್ ಲೈವ್ ಬಂದಿದ್ದು, ಘಟನೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಬೆಂಗಳೂರಿನಿಂದ ಹಿಂತಿರುಗುವ ವೇಳೆ ಮುದುಗೆರೆಯಲ್ಲಿರುವ ಹೋಟೆಲ್ ಒಂದರ ಬಳಿ ಊಟ ಮಾಡಲು ಗಾಡಿಯನ್ನು ನಿಲ್ಲಿಸಿದ್ದಾರೆ. ಈ ವೇಳೆ ಮೈಸೂರಿನಿಂದ ಬರುತ್ತಿದ್ದ ಇನೋವಾ ಕಾರಿನ ಟೈರ್ ಬಸ್ಟ್ ಆಗಿ ಸುಮಾರು 100 ಮೀಟರ್ ದೂರದಲ್ಲಿ ಹೋಗಿ ಪಲ್ಟಿಯಾಗಿದೆ. ಆದರೆ ಹಿಂಬದಿಯಿದ್ದ ಯಾವ ವಾಹನದವರೂ ಸಹಾಯಕ್ಕೆ ಬರಲಿಲ್ಲ. ತಕ್ಷಣವೇ ಪ್ರತಾಪ್ ಸಿಂಹ ಮತ್ತವರ ಗನ್ ಮ್ಯಾನ್ ಪ್ರವೀಣ್ ಸೇರಿ ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿದ್ದವರನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಬೇರೊಂದು ವಾಹನದಲ್ಲಿ ತಕ್ಷಣವೇ ಆಸ್ಪತ್ರೆಗೆ ಕಳುಹಿಸಿದ್ದಾರೆ.
ರಸ್ತೆಯಲ್ಲಿ ಅಪಘಾತವಾಗಿದ್ದವರನ್ನು ನೋಡಿದರೂ ಕೆಲವರು ಸಹಾಯಕ್ಕೆ ಬಾರದಿರುವುದು ಅತ್ಯಂತ ಬೇಸರದ ಸಂಗತಿ. ಯಾರಾದರೂ ಅಪಘಾತದಲ್ಲಿ ಗಾಯಗೊಂಡಿದ್ದರೆ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸಕ್ಕೆ ಮುಂದಾಗಬೇಕು.
– ಪ್ರತಾಪ್ ಸಿಂಹ, ಕೊಡಗು ಹಾಗೂ ಮೈಸೂರು ಸಂಸದ
ಮಾಹಿತಿ ಕೊರತೆಯಿಂದ ಅನೇಕ ಮಾಧ್ಯಮಗಳು ಸಂಸದ ಪ್ರತಾಪ್ ಸಿಂಹ ಅವರ ಕಾರು ಅಪಘಾತವಾಗಿದೆ ಎಂದು ವರದಿ ಮಾಡಿದ್ದವು ಈಗ ಸ್ವತಃ ಪ್ರತಾಪ್ ಸಿಂಹ ಅವರೇ ಸ್ಪಷ್ಟನೆ ನೀಡಿದ್ದು, ತಾನು ಸುರಕ್ಷಿತವಿರುವುದಾಗಿ ತಿಳಿಸಿದ್ದಾರೆ.