ಕಲಬುರಗಿ: ಬಸ್ ನಿಲ್ದಾಣದಲ್ಲಿ ನೂರಾರು ಜನರ ಎದುರೇ ಪೊಲೀಸ್ ಕಾನ್ ಸ್ಟೇಬಲ್ ಮಗನನ್ನು ಬರ್ಭರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟಿರುವ ಯುವಕ ವಿದ್ಯಾನಗರದ ನಿವಾಸಿ ಅಭಿಷೇಕ್(27) ಈತನ ತಂದೆ ಚಂದ್ರಕಾಂತ ಪೊಲೀಸ್ ಪೇದೆ ಎಂದು ತಿಳಿದುಬಂದಿದೆ.
ಮೃತಪಟ್ಟ ಅಭಿಷೇಕ್ ಗುರುವಾರ ಬೆಳಿಗ್ಗೆ ಮನೆಯಿಂದ ಜಿಮ್ ಗೆ ಹೋಗುವುದಾಗಿ ಹೇಳಿ ಬಂದಿದ್ದ. ದಾರಿಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಿದರು. ಇದನ್ನು ಗಮನಿಸಿದ ಅಭೀಷೇಕ್ ತನ್ನ ಬೈಕ್ ನನ್ನು ಬಸ್ ನಿಲ್ದಾಣದ ಬಳಿಯಲ್ಲಿ ನಿಲ್ಲಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ತನ್ನ ಸಹಾಯಕ್ಕಾಗಿ ನಿಲ್ದಾಣದಲ್ಲಿದ್ದ ಜನರ ಮಧ್ಯೆಯೂ ಓಡಿದ. ಆದರೆ ಬಸ್ ನಿಲ್ದಾಣದ ಒಳಗೆ ಆತನನ್ನು ಹಿಂಬಾಲಿಸಿಕೊಂಡು ಓಡಿ ಬಂದ ದುಷ್ಕರ್ಮಿಗಳು ಆತನ ಕತ್ತನ್ನು ಕೊಯ್ದು ಅಲ್ಲಿಂದ ಪರಾರಿಯಾಗಿದ್ದಾರೆ.
ಬೆಳಿಗ್ಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದಂತಹ ಅನೇಕ ಪ್ರಯಾಣಿಕರು ಅಂಗಡಿಗಳ ವ್ಯಾಪಾರಿಗಳು ಈ ಘಟನೆಯನ್ನು ನೋಡಿ ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ಎಸಿಪಿ ಅಂಶಕುಮಾರ, ಇನ್ ಸ್ಪೆಕ್ಟರ್ ಪಂಡಿತ ಸಗರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನನ್ನು ಕೊಲೆ ಮಾಡಿದ ಆರೋಪಿಗಳು ಹಾಗೂ ಕೊಲೆ ಮಾಡಲು ಕಾರಣ ಏನು ಎಂದು ಇನ್ನೂ ತಿಳಿದುಬಂದಿಲ್ಲದೇ ಇರುವುದರಿಂದ ತನಿಖೆಯನ್ನು ಮುಂದುವರೆಸಿದ್ದೇವೆ ಎಂದು ಅಶೋಕ್ ನಗರ ಠಾಣೆಯ ಪೊಲೀಸರು ತಿಳಿಸಿದರು