ವಿಜಯಪುರ: ಆರ್ ಎಸ್ ಎಸ್ ಶಾಖೆಯಿಂದ ನಮಗೆ ಕಲಿಯುವುದು ಏನೂ ಇಲ್ಲ, ಆರ್ ಎಸ್ ಎಸ್ ನಿಂದ ತರಬೇತಿ ಪಡೆದುಕೊಂಡು ಬಂದವರು ವಿಧಾನಸೌಧದಲ್ಲಿ ಕಲಾಪ ನಡೆಯುವಾಗ ನೀಲಿ ಚಿತ್ರ ವೀಕ್ಷಣೆ ಮಾಡುತ್ತಿರುತ್ತಾರೆ ಎಂದು ಬಿಜೆಪಿ ನಾಯಕರಿಗೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಉಪ ಚುನಾವಣೆ ಪ್ರಚಾರದ ವೇಳೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ಬಿಜೆಪಿಯವರ ಆರ್ ಎಸ್ ಎಸ್ ಶಾಖೆ ಬೇಡ. ನಾನು ಇಲ್ಲಿ ಬಡಜನರ ಬಗ್ಗೆ ಕಲಿಯುತ್ತಿರುವ ಶಾಖೆಯೇ ಸಾಕು, ಅವರ ಆರ್ ಎಸ್ ಎಸ್ ಶಾಖೆಯಿಂದ ನಾನು ಕಲಿಯುವುದು ಏನೂ ಇಲ್ಲ ಎಂದು ಹೇಳಿದರು.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇತ್ತೀಚೆಗೆ ಕುಮಾರಸ್ವಾಮಿಯವರನ್ನು ಆರ್ ಎಸ್ ಎಸ್ ಶಾಖೆಗೆ ಬಂದು ಸಂಘದ ಚಟುವಟಿಕೆಗಳನ್ನು ಕಲಿಯುವಂತೆ ಆಹ್ವಾನವನ್ನು ನೀಡಿದ್ದರು.
2012ರ ಘಟನೆಯನ್ನು ಇದೇ ವೇಳೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಸದನದಲ್ಲಿ ಕಲಾಪ ವೇಳೆ ಬ್ಲೂ ಫಿಲ್ಮ್ ನೋಡಿ ಮೂವರು ಬಿಜೆಪಿ ಪಕ್ಷದ ಸಚಿವರು ಸಿಕ್ಕಿಬಿದ್ದಿದ್ದರು. ಇದರಿಂದ ಅಂದಿನ ಬಿಜೆಪಿ ಸರ್ಕಾರಕ್ಕೆ ಇರಿಸುಮುರುಸಾಗಿತ್ತು, ನಂತರ ಮೂವರು ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು ಇಂತಹ ಕೆಟ್ಟ ವಿಷಯಗಳನ್ನು ಕಲಿಯಲು ನಾನು ಆರ್ ಎಸ್ ಎಸ್ ಶಾಖೆಗೆ ಹೂಗಬೇಕೆ ಎಂದು ಹೇಳಿದರು.
ಪುಸ್ತಕವೊಂದನ್ನು ಉಲ್ಲೇಖಿಸಿದ ಅವರು, ಆರ್ ಎಸ್ ಎಸ್ ಅದರ ” ಹಿಡನ್ ಅಜೆಂಡಾ”ದ ಭಾಗವಾಗಿ, ಈ ದೇಶದಲ್ಲಿ ಅಧಿಕಾರಶಾಹಿಗಳ ತಂಡವನ್ನು ರಚಿಸಿ ಅವರನ್ನು ಈಗ ವಿವಿಧ ಸಂಸ್ಥೆಗಳಲ್ಲಿ ಇರಿಸಲಾಗಿದೆ.ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಆರ್ ಎಸ್ ಎಸ್ ನಿರ್ದೇಶನದ ಪ್ರಕಾರವೇ ಕೆಲಸವನ್ನು ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಆರ್ ಎಸ್ ಎಸ್ ಸಂಘಟನೆಯ ಕೈಗೊಂಬೆ ಎಂದು ಟೀಕಿಸಿದರು.