ಯಲಬುರ್ಗಾ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅರ್ಥಶಾಸ್ತ್ರವೇ ಗೊತ್ತಿಲ್ಲ, ಇಂತಹವರಿಂದ ದೇಶ ಆರ್ಥಿಕ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ.
ಪಟ್ಟಣದ ರಂಗಮಂದಿರದಲ್ಲಿ ಶನಿವಾರ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಅಭಿಯಾನದಡಿ ತುಂಗಭದ್ರಾ ಮತ್ತು ಕೃಷ್ಣಾ ನದಿಯಿಂದ ಕೆರೆಯನ್ನು ತುಂಬಿಸುವ ಯೋಜನೆಯ ಕುರಿತು ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅರ್ಥಶಾಸ್ತ್ರಜ್ಞ ಡಾ. ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಸಾಕಷ್ಟು ಆರ್ಥಿಕ ಪ್ರಗತಿ ಸಾಧಿಸಿತ್ತು. ಆದರೆ ಮೋದಿ ಪ್ರಧಾನಿಯಾದ ಮೇಲೆ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಜನತೆಗೆ ಮೂಲಸೌಕರ್ಯಗಳನ್ನು ಕಲ್ಪಿಸಿ, ನೆಮ್ಮದಿಯಿಂದ ಬದುಕುವುದಕ್ಕೆ ಅನುಕೂಲ ದೊರೆಕಿಸಿಕೊಡಬೇಕಾದದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯವಾಗಬೇಕು. ಅದು ಬಿಟ್ಟು ಜಾತಿ, ಧರ್ಮಗಳನ್ನು ಒಡೆದು ಆಳುವ ಹಿಟ್ಲರ್ ನೀತಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
18 ವರ್ಷ ಈ ಕ್ಷೇತ್ರದ ಶಾಸಕನಾಗಿ ದೇಶದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ. ಆದರೆ, ಕೆಲವರು ನನ್ನ ಅಭಿವೃದ್ಧಿ ಸಹಿಸದೆ ಈ ಹಿಂದೆ ನನ್ನ ಮೇಲೆ ಕಲ್ಲು ಎತ್ತಿಹಾಕಲು ಬಂದಿದ್ದರು. ಚೇರ್ನಿಂದ ಹೊಡೆಯಲು ಬಂದಿದ್ದರು. ಅವರು ಇದೀಗ ಏನಾಗಿದ್ದಾರೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ನಾ ಯಾರಿಗೊ ಹೆದರಿ ಓಡಿ ಹೋಗುವ ವ್ಯಕ್ತಿಯಲ್ಲ, ಅಭಿವೃದ್ಧಿಗಾಗಿ ಪ್ರಾಣಕೊಡಲು ಸಿದ್ಧನಿದ್ದೇನೆ ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿಯನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ರಾಮಣ್ಣ ಸಾಲಭಾವಿ, ಅಡಿವೆಪ್ಪ ಭಾವಿಮನಿ, ಬಿ.ಎಂ. ಶಿರೂರು, ಯಂಕಣ್ಣ ಯರಾಶಿ, ಗುನ್ನಾಳ ರಾಘಣ್ಣ, ಸಂಗಣ್ಣ ಟೆಂಗಿನಕಾಯಿ, ಡಾ. ಶರಣಪ್ಪ ಕೊಪ್ಪಳ, ರಾಜಶೇಖರ ನಿಂಗೋಜಿ, ಎನ್.ಎಂ. ನದಾಫ್, ಮಹಾಂತೇಶ ಗಾಣಿಗೇರ, ಶರಣಪ್ಪ ಗಾಂಜಿ, ಸಾವಿತ್ರಿ ಗೊಲ್ಲರ್, ಡಾ. ನಂದಿತಾ ದಾನರಡ್ಡಿ, ಡಾ. ಎಸ್. ದಾನರಡ್ಡಿ, ಬಸವರಾಜ ಕುಡಗುಂಟಿ, ಈಶ್ವರ ಅಟಮಾಳಗಿ ಮತ್ತಿತರರು ಇದ್ದರು.