ಮೈಸೂರು: ನಾಡಹಬ್ಬದ ಹೆಸರಿನಲ್ಲಿ ಜಂಬೂ ಸವಾರಿ ವೇಳೆ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಕೂರಿಸುವುದು ಸಂವಿಧಾನಕ್ಕೆ ಮಾಡುವ ಅಪಚಾರ ಈ ವಿಷಯವಾಗಿ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ತಿಳಿಸಿದ್ದಾರೆ.
ಮಹಿಷ ದಸರಾ ಆಚರಣಾ ಸಮಿತಿಯ ವತಿಯಿಂದ ನಗರದ ಅಶೋಕಪುರಂನಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ನಡೆದ ಮಹಿಷ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ವಿಚಾರ ಸಂಕಿರಣದಲ್ಲಿ ಮಾತನಾಡಿದ ಮಹೇಶ್ ಚಾಮುಂಡೇಶ್ವರಿ ಸಮಸ್ತ ಭಾರತದ ಪ್ರತಿನಿಧಿಯಲ್ಲ, ಬಹುಸಂಸ್ಕೃತಿಯ ಪ್ರತಿನಿಧಿಯೂ ಅಲ್ಲ, ಈಕೆ ಏಕ ಸಂಸ್ಕೃತಿಯ ಪ್ರತಿನಿಧಿ, ಆದ್ದರಿಂದ ನಾಡಹಬ್ಬದಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ ಮಾಡುವುದು ಸರಿಯಲ್ಲ, ಈ ವಿಷಯವಾಗಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ದಸರಾದಲ್ಲಿ ಚಾಮುಂಡೇಶ್ವರಿ ಪ್ರತಿಷ್ಠಾಪನೆಯನ್ನು ತಡೆಯಲು ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದರು.
ಈ ದೇಶದ ಸ್ವಾತಂತ್ರ್ಯಕ್ಕೆ ಸೇವೆಯನ್ನು ಸಲ್ಲಿಸಿದ ಗಾಂಧಿ, ಅಂಬೇಡ್ಕರ್, ಬೌದ್ಧ ಧರ್ಮಪ್ರಚಾರ ಮಾಡಿದ ಮಹಿಷನ ಫೊಟೊ ಇಟ್ಟು ಮೆರವಣಿಗೆ ಮಾಡಲಿ ಇಲ್ಲದಿದ್ದರೆ ನಾಲ್ವಡಿಕೃಷ್ಣರಾಜ ಒಡೆಯರ್ ಫೊಟೊವನ್ನು ಇರಿಸಲಿ, ಸಾರ್ವಜನಿಕರ ಹಣವನ್ನು ಬಳಸಿಕೊಂಡು ಬಹುಸಂಸ್ಕೃತಿಗೆ ವಿರುದ್ಧ ಇದ್ದವರನ್ನು ವೈಭವೀಕರಿಸುವುದು ಅಪಚಾರ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ್ ಸ್ವಾಮೀಜಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ಲೇಖಕ ಸಿದ್ದಸ್ವಾಮಿ, ದಲಿತ ಸಂಘರ್ಷ ಸಮಿತಿಯ ಬೆಟ್ಟಯ್ಯ ಕೋಟೆ, ಚೋರನಹಳ್ಳಿ ಶಿವಣ್ಣ, ಆಲಗೂಡು ಶಿವಕುಮಾರ್, ಜನಸಂಗ್ರಾಮ ಪರಿಷತ್ನ ನಗರ್ಲೆ ವಿಜಯಕುಮಾರ್, ಸಾಹಿತಿ ಕೃಷ್ಣಮೂರ್ತಿ ಚಮರಂ, ಅಶೋಕಪುರಂ ರೇವಣ್ಣ, ಎಡದೊರೆ ಮಹದೇವಯ್ಯ ಸೇರಿ ಮುಂತಾದವರು ಭಾಗವಹಿಸಿದ್ದರು.