ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಕ್ಕಿಯ ಕಾಫಿ ತೋಟವೊಂದರಲ್ಲಿ ನಡೆದಿದೆ. ಲೀಲಾಬಾಯಿ (38) ಮೃತಪಟ್ಟ ದುರ್ದೈವಿ.
ಕಲ್ಲಕ್ಕಿ ಎಸ್ಟೇಟ್ ಲೈನಿನಲ್ಲಿ ದಾವಣಗೆರೆ ಮೂಲದ ಶಿವ ಹಾಗೂ ಪತ್ನಿ ಲೀಲಾಬಾಯಿ ಕಾರ್ಮಿಕರಾಗಿ ಎರಡು ವರ್ಷದಿಂದ ತೋಟದ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಕುಡಿದ ಅಮಲಿನಲ್ಲಿ ಶಿವ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿ ದೊಣ್ಣೆಯಿಂದ ಪತ್ನಿ ಲೀಲಾಬಾಯಿ ತಲೆಗೆ ಹೊಡಿದಿದ್ದು ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಂಗಳವಾರ ಸಹಜ ಸಾವಾಗಿದೆ ಎಂದು ತೋಟದ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ.
ಸ್ಥಳ ಮಹಜರು ಮಾಡುವ ವೇಳೆ ಸಿಕ್ಕಿಬಿದ್ದ ಆರೋಪಿ
ಸಾವಿನ ಕುರಿತಂತೆ ತೋಟದ ಮೇಲ್ವಿಚಾರಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ಮಹಜರು ನಡೆಸಿ ಆರೋಪಿ ಶಿವನನ್ನು (ಲೀಲಾಬಾಯಿ ಪತಿ) ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆರೋಪಿ ಬಾಯಿಬಿಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಮೂಡಿಗೆರೆ ಸರ್ಕಲ್ ಇನ್ ಸ್ಪೆಕ್ಟರ್ ಸೋಮೇಗೌಡ, ಬಾಳೂರು ಸಬ್ ಇನ್ ಸ್ಪೆಕ್ಟರ್ ವಿ. ಶ್ರೀನಾಥ್ ರೆಡ್ಡಿ, ಎಎಸ್ಐಗಳಾದ ರಾಜು, ವಿಶ್ವನಾಥ್, ಹೆಡ್ ಕಾನ್ ಸ್ಟೇಬಲ್ ಶ್ರೀಧರ್, ಸಿಬ್ಬಂದಿಗಳಾದ ಗಿರೀಶ್, ಮನು, ಅಭಿಷೇಕ್, ಮಹೇಶ್, ಸತೀಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಶವವನ್ನು ಶವಾಗಾರಕ್ಕೆ ಸಾಗಿಸಲು ಜಾವಳಿಯ ಧರ್ಮಸ್ಥಳ ಶೌರ್ಯ ರಾಷ್ಟ್ರೀಯ ವಿಪತ್ತು ಘಟಕದ ಸದಸ್ಯರು ಸಹಕರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ವರದಿ: ತನು ಕೊಟ್ಟಿಗೆಹಾರ