ಬೆಂಗಳೂರು:ದಾಖಲೆ ಇದ್ದರೂ ಸುಖಾಸುಮ್ಮನೆ ಲಾರಿ ಚಾಲಕನ ಮೇಲೆ ಪೊಲೀಸರು ದರ್ಪವನ್ನು ತೋರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸಮೀಪ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೊರವಲಯದ ರಾಣಿಕ್ರಾಸ್ ಬಳಿ ಪೊಲೀಸರು ಲಾರಿಯನ್ನು ನಿಲ್ಲಿಸಿ ಲಾರಿ ಚಾಲಕನಿಗೆ ಕಿರುಕುಳವನ್ನು ನೀಡಿದ್ದಾರೆ ಎಂದು ಲಾರಿಯ ಮಾಲೀಕರು ಮತ್ತು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು ಅನಗತ್ಯ ಕಿರುಕುಳ ನೀಡಿದ ಪೋಲೀಸರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರದಿಂದ ಬೆಂಗಳೂರಿನತ್ತ ಗ್ರಾನೈಟ್ ಕಲ್ಲುಗಳನ್ನು ತುಂಬಿಕೊಂಡು ಲಾರಿ ಬರುತ್ತಿದ್ದ ಸಮಯದಲ್ಲಿ ಲಾರಿಯನ್ನು ಸೈಡಿಗೆ ಹಾಕಿಸಿ ವಿಜಯಪುರ ಪೊಲೀಸರಿಂದ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗಿದೆ. ಎಲ್ಲಾ ದಾಖಲೆಗಳನ್ನು ಚಾಲಕ ನೀಡಿದರೂ ಸಹ ಲಾರಿಯನ್ನು ಕಳಿಸದೇ ಪೊಲೀಸರು ದರ್ಪ ನಡೆಸಿದ್ದಾರೆ,
ದರ್ಪ ನಡೆಸಿದ ಪೊಲೀಸರನ್ನು ಚಾಲಕ ಪ್ರಶ್ನಿಸಿದ ಕಾರಣಕ್ಕೆ ಪೊಲೀಸರು ಚಾಲಕ, ಲಾರಿ ಮಾಲೀಕರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದೂರನ್ನು ದಾಖಲಿಸಿಕೊಂಡಿದ್ದಾರೆ.
ದೌರ್ಜನ್ಯವೆಸಗಿದಂತಹ ಪೊಲೀಸರ ವಿರುದ್ದ ಚಾಲಕರು, ಮಾಲೀಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಗಳು ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ