ಬೆಂಗಳೂರು: ನಿಮ್ಮ ರಾಜಕೀಯ ಉಳಿಗಾಲಕ್ಕಾಗಿ ನನ್ನನ್ನು, ದೇವೇಗೌಡರನ್ನು ಟೀಕೆ ಮಾಡುವುದು ನಿಮಗೆ ಅನಿವಾರ್ಯ. ಅದು ತಪ್ಪಿದರೆ ನಿಮಗೆ ಬೇರೆ ದಾರಿಯೇ ಇಲ್ಲ. ಕಾಂಗ್ರೆಸ್ನಲ್ಲಿ ನಿಮಗೆ ಮೂರು ಕಾಸಿನ ಬೆಲೆ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಜೆಡಿಎಸ್ ದುರ್ಬಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಗಲುಕನಸನ್ನು ಕಾಣುವವರ ಮೇಲೆ ಅನುಕಂಪವಿದೆ. ಜೆಡಿಎಸ್ ಮತ್ತು ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ ಮತ್ತೆ ಮತ್ತೆ ಅವರು ಅದೇ ಜಪ ಮಾಡುತ್ತಿದ್ದಾರೆ. ನಮ್ಮ ಸೋಲಿನ ಕಾರಣ ಮಂಡ್ಯ ಜನತೆಗೆ ಗೊತ್ತಿದೆ. ನಿಖಿಲ್ ಆರು ಲಕ್ಷ ಮತವನ್ನು ಗಳಿಸಿದ್ದರು. ರೈತಸಂಘ, ಕಾಂಗ್ರೆಸ್, ಬಿಜೆಪಿ ಹಾಗೂ ಕೆಲ ಮಾಧ್ಯಮಗಳು ಸೇರಿ ‘ಮ್ಯಾನೇಜ್’ ಮಾಡಿದ ಚುನಾವಣೆ ಅದಾಗಿತ್ತು. ಕೌರವರು ಮಹಾಭಾರತದಲ್ಲಿ ರಚಿಸಿದ್ದ ಚಕ್ರವ್ಯೂಹದಲ್ಲಿ ಅಭಿಮನ್ಯು ಹೇಗೆ ಸಿಲುಕಿದ್ದನೋ ಅದೇರೀತಿ ಇವರೆಲ್ಲರ ಷಡ್ಯಂತ್ರದ ಚಕ್ರವ್ಯೂಹದಲ್ಲಿ ನಿಖಿಲ್ ಸಿಲುಕಿದ್ದರು ಎಂದು ಹೇಳಿದರು.
ಭಾನುವಾರ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಜೆಡಿಎಸ್ ಬಗ್ಗೆ ಮಾತನಾಡಲ್ಲ ಎನ್ನುತ್ತೀರಿ. ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದೇನೆ ಅನ್ನುತ್ತೀರಿ. ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ ಎಂದು ಗೋಳಾಡುತ್ತೀರಿ. ಮತ್ತೆ ಯಾವ ಕಾರಣಕ್ಕೆ ನಮ್ಮ ಬಗ್ಗೆ ಮಾತು? ಬಿಜೆಪಿಯವರು ನಿಮ್ಮ ಹೇಳಿಕೆಗಳಿಗೆ ಕ್ಯಾರೇ ಅನ್ನುವುದಿಲ್ಲ. ನಮ್ಮ ಬಗ್ಗೆ ಮಾತನಾಡದಿದ್ದರೆ ನಿಮಗೆ ಗತಿಯೇ ಇಲ್ಲ. ಕುಮಾರಸ್ವಾಮಿಯವರ ಟೀಕೆಗಳನ್ನು ನಿರ್ಲಕ್ಷ್ಯ ಮಾಡುತ್ತೇನೆ ಎಂದು ಹೇಳುತ್ತಲೇ ಕುಮಾರಸ್ವಾಮಿಯವರ ಸುತ್ತಲೇ ಯಾಕೆ ಗಿರಕಿ ಹೊಡೆಯುತ್ತೀರಿ ಸಿದ್ದರಾಮಯ್ಯನವರೇ ಎಂದು ಹರಿಹಾಯ್ದಿದ್ದಾರೆ.
ಸಮ್ಮಿಶ್ರ ಸರಕಾರದ ಮೈತ್ರಿಯ ಭಾಗವಾಗಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದ ನಿಮ್ಮ ಹೀನ ರಾಜಕೀಯ ಏನೆಂದು ಯಾರಿಗೆ ಗೊತ್ತಿಲ್ಲ ಹೇಳಿ? ನಿಮ್ಮ ಕುತಂತ್ರ ಹೆಜ್ಜೆಗಳು ಎಲ್ಲೆಲ್ಲಿ ಮೂಡಿದವು ಎಂಬುದು ಜನರಿಗೆ ಗೊತ್ತಿಲ್ಲದ ಸಂಗತಿ ಏನಲ್ಲ ಅಂತಹ ಚಕ್ರವ್ಯೂಹ ರಚಿಸಿರಲಿಲ್ಲ ಎಂದಾದರೆ ಬ್ರೂಟಸ್ ಪಾಲಿಟಿಕ್ಸ್ ಮಾಡಿ ನಮ್ಮ ಅಭ್ಯರ್ಥಿಯನ್ನು ಸೋಲಿಸಿದ್ದು ಏಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ