ಚಿತ್ರದುರ್ಗ: ಅನೇಕ ಜನರಿಗೆ ಕೆಎಸ್ಆರ್ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ ನಕಲಿ ದಾಖಲೆಯನ್ನು ಸೃಷ್ಟಿಸಿ 70 ಲಕ್ಷ ರೂಪಾಯಿ ವಂಚಿಸಿದ್ದ ಐವರನ್ನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಸಂಬಂಧ ಆರೋಪಿಗಳಾದ ಬಾದಾಮಿ ತಾಲೂಕಿನ ಕುಟುಕನಕೇರಿ ಗ್ರಾಮದ ಮಹಮದ್ ಅಲ್ಲಾ ಸಾಬ್, ಸುಭಾಷ್ ಕಾಲೋನಿಯ ಬಸವರಾಜ್, ಬಾಗಲಕೋಟೆಯ ವೀರಭದ್ರಪ್ಪ ಸೋಮಲಿಂಗಪ್ಪ ಅರಗಿನಶೆಟ್ಟಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದ ಮಂಜುನಾಥ್ ಹಾಗು ಬೆಂಗಳೂರಿನ ಆರ್ಪಿಸಿ ಲೇಔಟ್ನ ಅನಿಲ್ ಕುಮಾರ್ ನವರನ್ನು ಬಂಧಿಸಲಾಗಿದೆ.
ಈ ಐದು ಜನ ಆರೋಪಿಗಳು ವಿಕಾಸಸೌಧ ಮತ್ತು ವಿಧಾನಸೌಧದಲ್ಲಿ ನಮಗೆ ಉನ್ನತಾಧಿಕಾರಿಗಳು ಪರಿಚಯವಿದ್ದಾರೆ. ಖಂಡಿತ ಉದ್ಯೋಗವನ್ನು ಕೊಡಿಸುತ್ತೇವೆ ಎಂದು ಉದ್ಯೋಗಾಕಾಂಕ್ಷಿಗಳನ್ನು ನಂಬಿಸಿ ಸಾವಿರಗಟ್ಟಲೆ ಹಣವನ್ನು ಪಡೆದಿದ್ದಾರೆ. ಅಲ್ಲದೇ ಹಂಗರಿ ಬೊಮ್ಮನಹಳ್ಳಿ ಕೆಎಸ್ಆರ್ಟಿಸಿ ಕಚೇರಿಯ ಬಳಿ ಸಂದರ್ಶನ ಮಾದರಿಯಲ್ಲಿ ನಾಟಕ ಮಾಡಿದ್ದಾರೆಂದು ತಿಳಿದುಬಂದಿದೆ.
ಕಳೆದ 2019ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರಿ ನಿರೀಕ್ಷಕರು, ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು ಈ ಆರೋಪಿಗಳು ಇದನ್ನೇ ಬಂಡವಾಳ ಮಾಡಿಕೊಂಡು ನಕಲಿ ದಾಖಲೆಯನ್ನು ಸೃಷ್ಟಿಸಿ ಇವರೆಲ್ಲರನ್ನೂ ವಂಚಿಸಿದ್ದರು. ಆರೋಪಿಗಳು ಬೆಂಗಳೂರು, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ಇದೇ ರೀತಿ ಅನೇಕ ಮಂದಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಇವರನ್ನು ಬಂಧಿಸಿ ಇವರ ಬಳಿ ಇದ್ದ 12 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂ ಮೌಲ್ಯದ ಕಾರು, ನಕಲಿ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.