ನವದೆಹಲಿ: ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್, ಎಚ್ಎಎಮ್ನ ಜಿತನ್ ರಾಮ್ ಮಾಂಝಿ ಮತ್ತು ವಿಐಪಿಯ ಮುಖೇಶ್ ಸಹಾನಿ ಸೇರಿದಂತೆ ಬಿಹಾರದ 10 ರಾಜಕೀಯ ಪಕ್ಷಗಳ ನಾಯಕರ ನಿಯೋಗವು ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಜಾತಿ ಆಧಾರಿತ ಜನಗಣತಿ ನಡೆಸುವ ಕುರಿತು ಚರ್ಚಿಸಿದೆ.
“ನಿಯೋಗದ ಎಲ್ಲ ಸದಸ್ಯರ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಆಲಿಸಿದ್ದಾರೆ. ನಾವು ಅದರ ಬಗ್ಗೆ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಯನ್ನು ಒತ್ತಾಯಿಸಿದ್ದೇವೆ ಮತ್ತು ಜಾತಿ ಗಣತಿಯ ಕುರಿತು ರಾಜ್ಯ ವಿಧಾನಸಭೆಯಲ್ಲಿ ಎರಡು ಬಾರಿ ನಿರ್ಣಯಗಳನ್ನು ಹೇಗೆ ಅಂಗೀಕರಿಸಲಾಗಿದೆ ಎಂಬುದರ ಕುರಿತು ನಾವು ಅವರಿಗೆ ತಿಳಿಸಿದ್ದೇವೆ,” ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ದೆಹಲಿಯಲ್ಲಿ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದರು.
ಸಭೆಯ ನಂತರ ಮಾತನಾಡಿದ ಆರ್ಜೆಡಿ ನಾಯಕ ತೇಜಸ್ವಿ ಯಾದವ್, “ನಮ್ಮ ನಿಯೋಗವು ಸೋಮವಾರ ಪ್ರಧಾನಿಯವರನ್ನು ಭೇಟಿಯಾಗಿ, ಬಿಹಾರ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಜಾತಿ ಆಧಾರಿತ ಜನಗಣತಿಗಾಗಿ ಮನವಿ ಮಾಡಿದ್ದೇವೆ. ನಾವು ಈಗ ಕೇಂದ್ರ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ,” ಎಂದು ಹೇಳಿದರು.
ಬಿಜೆಪಿ ಹೊರತುಪಡಿಸಿ ಬಿಹಾರದ ಎಲ್ಲಾ ಪಕ್ಷಗಳು 2021ರ ಜನಗಣತಿಯಲ್ಲಿ ಜಾತಿ ಸಂಖ್ಯೆಗಳ ಎಣಿಕೆಗೆ ಬೇಡಿಕೆ ಇಟ್ಟಿವೆ. ಈ ಬೇಡಿಕೆಯನ್ನು ಪಾಲಿಸಲು ಕೇಂದ್ರ ಸರ್ಕಾರ ಇಲ್ಲಿಯವರೆಗೆ ನಿರಾಕರಿಸಿದ್ದರೆ, ಬಿಹಾರ ಉಪ ಮುಖ್ಯಮಂತ್ರಿ ರೇಣುದೇವಿ ಸೇರಿದಂತೆ ಕೆಲವು ಬಿಜೆಪಿ ಸದಸ್ಯರು ಜಾತಿ ಆಧಾರಿತ ಜನಗಣತಿಗೆ ಬೆಂಬಲವನ್ನು ನೀಡಿದ್ದಾರೆ.