ಢಾಕ: ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ ಪ್ರಕರಣ ವರದಿಯಾಗಿದ್ದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿಯೂ ಅಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ದೇವಾಲಯಗಳ ವಿಭಂಜನ ಪ್ರಕರಣಗಳು ವರದಿಯಾಗಿದೆ.
ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಶಿಯಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ 4 ದೇವಾಲಯಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಪೊಲೀಸರು 10 ಮಂದಿಯನ್ನು ಬಂಧಿಸಿದ್ದು ಪ್ರದೇಶದಲ್ಲಿ ಬಿಗಿ ಭದ್ರತೆ ಒದಗಿಸಿದ್ದಾರೆ ಶುಕ್ರವಾರದಂದು ಹಿಂದೂ ಹಾಗೂ ಮುಸಲ್ಮಾನ ನಿವಾಸಿಗಳ ನಡುವೆ ಮಾತಿನ ಚಕಮಕಿಯ ಪರಿಣಾಮ ಈ ಘಟನೆ ನಡೆದಿದೆ ಎಂದು ಢಾಕ ಸ್ಥಳೀಯ ಸುದ್ದಿ ವಾಹಿನಿ ತಿಳಿಸಿದೆ.
ಸ್ಥಳೀಯ ನಿವಾಸಿಗಳು ಹಾಗೂ ಸಂತ್ರಸ್ತರ ಪ್ರಕಾರ, ಶಿಯಾಲಿ ಮಹಾಸ್ಮಾಶನ್ ದೇವಾಲಯದ ಮೇಲೆ ದಾಳಿ ನಡೆಸಿದ್ದು ವಿಗ್ರಹಗಳನ್ನು ಧ್ವಂಸಗೊಳಿಸಿ ಚಿತಾಗಾರದ ಮೇಲೆಯೂ ದಾಳಿ ನಡೆಸಿದ್ದಾರೆ. ಅಲ್ಲಿಂದ ಶಿಯಾಲಿಯ ಪುರ್ಬಪಾರ ಪ್ರದೇಶದಲ್ಲಿಯೂ ದಾಳಿ ನಡೆಸಿದ್ದು, ಅಲ್ಲಿಯೂ ಹಿಂದೂ ದೇವಾಲಯ ಹಾಗೂ ವಿಗ್ರಹಗಳ ಮೇಲೆ ದಾಳಿಯನ್ನು ನಡೆಸಿದ್ದು, ಹರಿ ಮಂದಿರ್, ದುರ್ಗಾ ಮಂದಿರ, ಗೋವಿಂದ ಮಂದಿರಗಳ ಮೇಲೆಯೂ ದಾಳಿ ನಡೆದಿದೆ.
ದೇವಾಲಯಗಳಷ್ಟೇ ಅಲ್ಲದೇ 6 ಮಳಿಗೆಗಳು ಸ್ಥಳೀಯ ಹಿಂದೂ ಸಮುದಾಯದ ಎರಡು ಮನೆಗಳನ್ನೂ ಧ್ವಂಸಗೊಳಿಸಲಾಗಿದೆ. ರೂಪಾ ಉಪಜಿಲಾ ಪೂಜೆ ಉದಜಪನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಸೇನ್ ಈ ಬಗ್ಗೆ ಮಾತನಾಡಿದ್ದು, ಈ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಆದರೆ ಸ್ಥಳೀಯ ಆಡಳಿತ ಪರಿಸ್ಥಿತಿ ನಿಭಾಯಿಸುವುದಕ್ಕೆ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.