ಬೆಂಗಳೂರು: ಮೇಕೆದಾಟು ಅಣೆಕಟ್ಟು ವಿಚಾರವಾಗಿ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಯವರು, ಮೇಕೆದಾಟು ವಿಚಾರದಲ್ಲಿ ನಾನು ಯಾರ ಪರವಾಗಿಯೂ ಮಾತನಾಡಲ್ಲ, ಈ ವಿಚಾರದಲ್ಲಿ ನನ್ನದು ಭಾರತದ ನಿಲುವು ಎಂದು ಹೇಳಿಕೆಯನ್ನು ನೀಡಿದ್ದರು. ಸಿ.ಟಿ.ರವಿ ಹೇಳಿಕೆಗೆ ಜೆಡಿಎಸ್ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮೇಕೆದಾಟು ವಿಚಾರದಲ್ಲಿ ನನ್ನದು ಭಾರತದ ನಿಲುವು ಎಂದಿರುವ ಸಿ.ಟಿ.ರವಿಯವರಿಗೆ ನಾವೆಲ್ಲ ಬೇರೆ ದೇಶದವರಂತೆ ಕಾಣುತ್ತೀದ್ದೇವಾ? ನಾವೇನು ಪಾಕಿಸ್ತಾನದವರಾ? ಚೀನಾದವರಾ? ಅಥವಾ ಅಮೇರಿಕಾದವರಾ? ನಾವು ಕೂಡ ಈ ಮಣ್ಣಿನಲ್ಲಿಯೇ ಹುಟ್ಟಿದ್ದೇವೆ, ನಾವೂ ಭಾರತೀಯರೇ. ಬಿಜೆಪಿಯವರು ಮಾತ್ರ ಭಾರತೀಯರು ಎಂಬ ಗುತ್ತಿಗೆ ಕೊಟ್ಟಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ ಅನ್ನುವದಕ್ಕಿಂತ ಮೊದಲು ನಾನು ಕನ್ನಡಿಗ. ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನನ್ನ ಕರ್ತವ್ಯವಾಗಬೇಕು. ಮೊದಲು ಕರ್ನಾಟಕ, ನನ್ನ ತಾಯಿಯನ್ನು ಕಾಪಾಡುವುದು ನನ್ನ ಕರ್ತವ್ಯ. ನನ್ನ ತಾಯಿ ಉಳಿದರೆ ತಾನೇ ಭಾರತೀಯ ತಾಯಿ ಉಳಿಯುವುದು. ಸಿ.ಟಿ.ರವಿ ಮೊದಲು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿಯವರು ಕಿಡಿಕಾರಿದ್ದಾರೆ.