ಬೆಂಗಳೂರು: ಫುಡ್ ಡೆಲಿವರಿ ಮಾಡಲು ತಡವಾಗುತ್ತಿದೆ ಎಂದ ಡೆಲಿವರಿ ಬಾಯ್ ನ ಕುತ್ತಿಗೆ ಪಟ್ಟಿಯನ್ನು ಹಿಡಿದು ಮಹಿಳೆಯೊಬ್ಬರು ಹೊರದಬ್ಬಿ ದಬ್ಬಾಳಿಕೆ ನಡೆಸಿದ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಈ ಘಟನೆ ನಗರದ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಪ್ತಿಯಲ್ಲಿರುವಂತಹ ಲಿಯಾನ್ ಗ್ರಿಲ್ ರೆಸ್ಟೋರೆಂಟ್ ನಲ್ಲಿ ಗುರುವಾರ ನಡೆದಿದೆ.
ಡೆಲಿವರಿ ಬಾಯ್ ಸಂಜಯ್ ಫುಡ್ ಪ್ಯಾಕೆಟ್ ನನ್ನು ಪಡೆಯಲು ರೆಸ್ಟೋರೆಂಟ್ ಗೆ ಬಂದಿದ್ದ. ಈ ವೇಳೆ ಫುಡ್ ಪ್ಯಾಕೆಟ್ ನನ್ನು ಕೊಡಲು ಆ ರೆಸ್ಟೋರೆಂಟ್ ನ ಮಹಿಳೆ ತಡಮಾಡಿದ್ದಕ್ಕೆ ಆತ ನೀವು ಈ ರೀತಿ ಫುಡ್ ಪ್ಯಾಕೆಟ್ ನೀಡಲು ತಡಮಾಡಿದರೆ ಗ್ರಾಹಕರಿಗೆ ಇದನ್ನು ತಲುಪಿಸುವುದು ಕೂಡ ತಡವಾಗುತ್ತದೆ ಎಂದಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನ ಜೊತೆ ಜಗಳಕ್ಕೆ ಇಳಿದಿದ್ದಾಳೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತು ನಂತರ ಆ ಮಹಿಳೆ ಡೆಲಿವರಿ ಬಾಯ್ ನ ಕುತ್ತಿಗೆಯನ್ನು ಹಿಡಿದು ಎಳೆದೋಯ್ದು ರೆಸ್ಟೋರೆಂಟ್ ನಿಂದ ಹೊರದಬ್ಬಿದ್ದಾಳೆ.
ಘಟನೆ ನಗರದಲ್ಲಿ ಹಬ್ಬುತ್ತಿದ್ದಂತೆ ಡೆಲಿವರಿ ಬಾಯ್ ನ ಸಹಾಯಕ್ಕೆ ನಿಂತ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಆ ರೆಸ್ಟೋರೆಂಟ್ ನ ಮ್ಯಾನೇಜರ್ ಪ್ರಶಾಂತ್ ಎಂಬುವವರನ್ನು ಭೇಟಿಯಾಗಿ ಆ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.
ರೆಸ್ಟೋರೆಂಟ್ ನ ಸಿಸಿಟಿವಿಯಲ್ಲಿ ಮಹಿಳೆಯ ಕೃತ್ಯವನ್ನು ಆಕೆ ನಡೆಸಿದ ದಬ್ಬಾಳಿಕೆಯನ್ನು ಗಮನಿಸಿದ ಮ್ಯಾನೇಜರ್ ಮಹಿಳೆಯನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಆ ಮಹಿಳೆಯಿಂದಲೇ ಡೆಲಿವರಿ ಬಾಯ್ ನ ಒಂದು ದಿನದ ಸಂಬಳವನ್ನು ಸಂಘಟನೆಯ ಕಾರ್ಯಕರ್ತರು ಕೊಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.