Sunday, December 3, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ಎಸ್ಟೇಟ್ ಕಾರ್ಮಿಕ ಮಹಿಳೆಯ ಹತ್ಯೆ ಪ್ರಕರಣ

ಚಿಕ್ಕಮಗಳೂರು: ಎಸ್ಟೇಟ್ ಕಾರ್ಮಿಕ ಮಹಿಳೆಯ ಹತ್ಯೆ ಪ್ರಕರಣ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಎಸ್ಟೇಟ್​ನಲ್ಲಿ ಕಾರ್ಮಿಕ ಮಹಿಳೆಯನ್ನು ಕೊಂದು ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದು‌ 18 ದಿನಗಳ ಬಳಿಕ ಮಹಿಳೆ ಗುರುತು ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಶಿವಮೊಗ್ಗ ಜಿಲ್ಲೆಯ ಗುಡ್ರುಕೊಪ್ಪ ಗ್ರಾಮದ ಮುತ್ತಮ್ಮನನ್ನು (75) ಜೂ. 12ರಂದು ಚಿಕ್ಕಮಗಳೂರು ತಾಲೂಕಿನ ಸಿದ್ದಾಪುರ ಬಳಿಯಿರುವ ಸುಪ್ರೀಂ ಎಸ್ಟೇಟ್​ನಲ್ಲಿ ಹತ್ಯೆ ಮಾಡಲಾಗಿತ್ತು. ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮದ್ಯ ಸೇವಿಸುವ ವಿಚಾರಕ್ಕೆ ಮುತ್ತಮ್ಮನನ್ನು ಹತ್ಯೆಗೈದಿದ್ದ ನಾಗರಾಜ್​ನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿತ್ತು.

ಮಹಿಳೆ ಗುರುತು ಪತ್ತೆಗೆ ರಚನೆಯಾಗಿತ್ತು ನಾಲ್ಕು ತಂಡ

ನಾಪತ್ತೆಯಾಗಿದ್ದ ಮುತ್ತಮ್ಮ ಪತ್ತೆಗಾಗಿ ಪೊಲೀಸರು ಇಡೀ ರಾಜ್ಯದ ಹಲವೆಡೆ ಸುತ್ತಿದ್ದರು. ಮನೆಯವರ ಜೊತೆ ಜಗಳವಾಡಿಕೊಂಡು ಮುತ್ತಮ್ಮ ಮನೆ ಬಿಟ್ಟುಬಂದಿದ್ದರು. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ‌ ನಾಪತ್ತೆ ಕೇಸ್ ದಾಖಲಾಗಿತ್ತು. ಬಳಿಕ ಮಹಿಳೆ ವಿಳಾಸ ನೀಡದೇ ಚಿಕ್ಕಮಗಳೂರಿನ ಎಸ್ಟೇಟ್ ಒಂದರಲ್ಲಿ ತೋಟದ ಕೆಲಸಕ್ಕೆ ವೃದ್ಧೆ ಮುತ್ತಮ್ಮ ಸೇರಿಕೊಂಡಿದ್ದರು. ಹಾಗಾಗಿ ಮಹಿಳೆ ಗುರುತು ಪತ್ತೆಗಾಗಿ 4 ವಿಶೇಷ ತಂಡ ರಚನೆ ಮಾಡಲಾಗಿತ್ತು. ಕೊನೆಗೆ ವೋಟರ್ ಐಡಿ ಮೂಲಕ ಪೊಲೀಸರು ಮಹಿಳೆ ಗುರುತು ಪತ್ತೆ ಹಚ್ಚಲಾಯಿತು.

18ದಿನದ ಬಳಿಕ ಸಿಕ್ಕ ಮಹಿಳೆಯ ಗುರುತು

ಕೊಲೆ ನಡೆದು 7 ದಿನದ ನಂತರ ಕೊಲೆಯಾಗಿರುವ ಬಗ್ಗೆ ಮಲ್ಲಂದೂರು ಠಾಣೆಯ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅಂದು ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಕೂಡ ಭೇಟಿ ನೀಡಿದ್ದರು. ಮುತ್ತಮ್ಮ ಮೃತ ದೇಹ ಸಂಪೂರ್ಣ ಸುಟ್ಟು ಹೋಗಿದ್ದ ಕಾರಣ ಹತ್ಯೆಯಾದ ಮಹಿಳೆಯ ಗುರುತು ಪತ್ತೆ ಪೊಲೀಸರಿಗೆ ಸವಾಲಾಗಿತ್ತು. ವೋಟರ್ ಐಡಿ ಸಹಾಯ ಹಾಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕೇಸ್ ಮೂಲಕ ಹತ್ಯೆಯಾಗಿ 18 ದಿನಗಳ ಬಳಿಕ ಮಹಿಳೆಯ ಗುರುತು ಪತ್ತೆಯಾಗಿದೆ.

ಮಧ್ಯ ಕುಡಿಯುವ ವಿಚಾರಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ

ಮಧ್ಯ ಕುಡಿಯುವ ವಿಚಾರಕ್ಕೆ ಮುತ್ತಮ್ಮ ಮತ್ತು ಎಸ್ಟೇಟ್ ನಲ್ಲಿ ಕಾರ್ಮಿಕನಾಗಿದ್ದ ನಾಗರಾಜ್ ನಾಯ್ಕ್ ನಡುವೆ ಜೂನ್ 12 ರಂದು ಗಲಾಟೆ ನಡೆದು ಕಲ್ಲಿನಿಂದ ಮುತ್ತಮ್ಮ ಅವರ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಆ ಬಳಿಕ ಹತ್ಯೆ ಮಾಡಿದ ಸ್ಥಳದಿಂದ ಮೂರು ಕಿಮೀ ದೂರದ ಕಾಫಿ ತೋಟದ ನಿರ್ಜನ ಪ್ರದೇಶದಲ್ಲಿ ಮುತ್ತಮ್ಮ ಮೃತ ದೇಹವನ್ನ ಯಾರಿಗೂ ತಿಳಿಯದಂತೆ ಸುಟ್ಟು ಹಾಕಿದ್ದ. ಇದಾದ 7 ದಿನದ ಬಳಿಕ ಶವ ಪತ್ತೆಯಾಗಿತ್ತು.

Most Popular

Recent Comments