ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಅಡಿಕೆ ತೋಟಗಳಿಗೆ ವ್ಯಾಪಕವಾಗಿ ಹಬ್ಬುತ್ತಿರುವ ಹಾಗೂ ಫಸಲು ಬರುವ ಅಡಿಕೆ ತೋಟಗಳನ್ನೇ ಸಂಪೂರ್ಣವಾಗಿ ನಾಶ ಮಾಡುತ್ತಿರುವ ಅಡಿಕೆ ಎಲೆಚುಕ್ಕಿ ರೋಗದ ಕುರಿತು ಮಾಹಿತಿ ಕಾರ್ಯಕ್ರಮದ ಆಯೋಜನೆ ನಡೆಸಲಾಗಿದೆ.
ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ನಿ.ಶಿವಮೊಗ್ಗ, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಶೃಂಗೇರಿ, ತಾಲೂಕು ಕೃಷಿಕ ಸಮಾಜ ಶೃಂಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 4 ರಂದು ಅಡಿಕೆ ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಶೃಂಗೇರಿಯ ಜಿ.ಎಸ್.ಬಿ ಸಭಾಭವನದಲ್ಲಿ ಮದ್ಯಾಹ್ನ 2.30 ಕ್ಕೆ ಆಯೋಜಿಸಲಾಗಿದೆ.
ಕಳೆದ ಅನೇಕ ವರ್ಷಗಳಿಂದ ನಿಧಾನಗತಿಯಲ್ಲಿ ಮಾರಕವಾದ ಹಳದಿ ಎಲೆ ರೋಗವು ಕಳಸ, ಶೃಂಗೇರಿ, ಹೊರನಾಡು ತೀರ್ಥಹಳ್ಳಿ, ಶಿವಮೊಗ್ಗ, ಸಾಗರ ಮುಂತಾದ ಪ್ರದೇಶಗಳ ತೋಟವನ್ನು ನಾಶ ಮಾಡುತ್ತಾ ಬಂದಿದ್ದು, ಪ್ರಸ್ತುತ ಹಬ್ಬುತ್ತಿರುವ ಎಲೆಚುಕ್ಕಿ ರೋಗವು ಫಸಲಿಗೆ ಹಾಗೂ ಸಂಪೂರ್ಣ ಮರಕ್ಕೆ ಹಾನಿಯನ್ನುಂಟು ಮಾಡುತ್ತಿದೆ. ಸರ್ಕಾರ ಈ ಕುರಿತಾಗಿ ಸಂಶೋಧನೆ ನಡೆಸುವ ಸಲುವಾಗಿ ಮತ್ತು ಈ ರೋಗ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪರಿಹಾರ ಮಾರ್ಗಗಳನ್ನು ಕೈಗೊಳ್ಳುವ ಕುರಿತು ಎಷ್ಟೇ ಹಣ ವ್ಯಯಿಸದರೂ ಕೂಡ ಇದರಿಂದ ಈ ವರೆಗೆ ಯಾವುದೇ ಪ್ರಯೋಜನಗಳಾಗಿಲ್ಲ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಜನರು ಮುಂದಿನ ದಿನಗಳಲ್ಲಿ ತೀವ್ರತರಹದ ಸಂಕಷ್ಟಗಳನ್ನು ಎದುರಿಸುವಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿ.ಎಸ್.ಬಿ ಸಭಾಂಗಣದಲ್ಲಿ ನಡೆಯುವ ಅಡಿಕೆ ಎಲೆಚುಕ್ಕಿ ರೋಗದ ಕುರಿತಾಗಿನ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ ಇಲ್ಲಿನ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ ಅವರು ಹಾಗೂ ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ ಇಲ್ಲಿನ ವಿಜ್ಞಾನಿಗಳಾದ ಡಾ.ಗಿರೀಶ್ ಇವರು ಭಾಗವಹಿಸಲಿದ್ದಾರೆ. ಹಾಗೆಯೇ ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಭಾಗವಹಿಸಲಿದ್ದಾರೆ.
ತಾಲೂಕಿನ ಎಲ್ಲಾ ರೈತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಮಾಹಿತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮಲ್ಲಿ ತೋಟದ ಕುರಿತಾಗಿರುವ ಗೊಂದಲ ಹಾಗೂ ಅಡಿಕೆ ಎಲೆಚುಕ್ಕಿ ರೋಗದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.
ಶೃಂಗೇರಿ ಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ; ವ್ಯಕ್ತಿಯ ದುರ್ಮರಣ:
ಶೃಂಗೇರಿ ಪಟ್ಟಣದಲ್ಲಿರುವ ಕಟ್ಟೆ ಬಾಗಿಲು ಬಳಿ ಮೊನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಬೈಕ್ ಗುದ್ದಿದ ಪರಿಣಾಮ ಕಾರ್ಮಿಕನೋರ್ವ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾನೆ.
ಮೃತ ವ್ಯಕ್ತಿಯನ್ನು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಮೂಲದ ಅಂಜನಪ್ಪ (37) ಎಂದು ಗುರುತಿಸಲಾಗಿದ್ದು, ಶೃಂಗೇರಿ ತಾಲೂಕಿನ ಹೊಳೆಕೊಪ್ಪ ಮಧುಸೂದನ್ ಎಂಬುವರಿಗೆ ಸೇರಿದ KA 04 JU 9686 ದ್ವಿಚಕ್ರ ವಾಹನ ಅಪಘಾತವನ್ನುಂಟು ಮಾಡಿತ್ತು.
ಹಿಂಬದಿಯಿಂದ ಬೈಕ್ ಗುದ್ದಿದ ಪರಿಣಾಮ ಅಂಜನಪ್ಪ ಅವರ ಎಡಗಾಲು ತಲೆ ಹಾಗೂ ಕೈಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ, ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಘಟನಾ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಮೃತರ ಸಂಬಂಧಿಕರು ದೂರು ದಾಖಲು ಮಾಡಿದ್ದಾರೆ. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಸಮರ್ಪಕ ಮಾಹಿತಿಯ ಕೊರತೆಯಿಂದಾಗಿ ಪ್ರಕರಣದ ಕುರಿತು ವರದಿಯನ್ನು ಬಿತ್ತರಿಸಲಾಗಿದೆ.