ಹುಬ್ಬಳ್ಳಿ : ಗಾಂಜಾ ಮಾರಾಟ ಮಾಡುತಿದ್ದ ಆರೋಪದಡಿ ಏಳು ಪೊಲೀಸ್ ಸಿಬ್ಬಂದಿಯನ್ನು ಕೆಲಸದಿಂದ ಅಮಾನತುಗೊಳಿಸಲಾದ ಘಟನೆ ರಾಜ್ಯದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ನಡೆದಿದೆ.
ಉಪ ಪೊಲೀಸ್ ಆಯುಕ್ತ ಕೆ ರಾಮರಾಜನ್ ಅವರಿಂದ ವರದಿ ಸ್ವೀಕರಿಸಿದ ನಂತರ ಹುಬ್ಬಳ್ಳಿ ನಗರ ಪೊಲೀಸ್ ಆಯುಕ್ತ ಲಾಭು ರಾಮ್ ಅಮಾನತು ಆದೇಶ ಹೊರಡಿಸಿದ್ದಾರೆ.
ಆರೋಪಿ ಪೊಲೀಸ್ ಸಿಬ್ಬಂದಿ ಸೆಪ್ಟೆಂಬರ್ 30ರಂದು ಗಾಂಜಾ ಪೂರೈಕೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದ ಪೊಲೀಸರು ಇಬ್ಬರನ್ನು ಬಂಧಿಸಿ 1 ಕೆಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಂಡಿದ್ದರು, ಆದರೆ ಪೊಲೀಸರು ಲಂಚ ಪಡೆದು ಕಳ್ಳಸಾಗಣೆದಾರರನ್ನು ಬಿಟ್ಟು ಕಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಆರೋಪಿ ಪೊಲೀಸ್ ಸಿಬ್ಬಂದಿ ಶಂಕಿತ ಆರೋಪಿಗಳಿಂದ ವಶಪಡಿಸಿಕೊಂಡಂತಹ ಗಾಂಜಾವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂದಿರುವ ಆರೋಪದ ಆಧಾರದ ಮೇಲೆ, ಪೊಲೀಸ್ ಆಯುಕ್ತ ಲಾಭು ರಾಮ್ ಈ ಸಂಬಂಧ ವರದಿಯನ್ನು ಸಲ್ಲಿಸುವಂತೆ ಉಪ ಪೊಲೀಸ್ ಆಯುಕ್ತ ಕೆ ರಾಮರಾಜನನ್ನು ಕೇಳಿದ್ದರು.ವಿಚಾರಣೆಯ ನಂತರ, ಡಿಸಿಪಿ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಎರಡು ಪೊಲೀಸ್ ಠಾಣೆಗಳ ಏಳು ಪೊಲೀಸರ ಬಗ್ಗೆ ವರದಿಯನ್ನು ತಯಾರಿಸಿ ಅದನ್ನು ಆಯುಕ್ತರಿಗೆ ಸಲ್ಲಿಸಿದರು. ಶಂಕಿತ ಅಪರಾಧದ ವರದಿಯನ್ನು ಸಲ್ಲಿಸಿದ ನಂತರ ಆಯುಕ್ತರು ಏಳು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಡಿಸಿಪಿ ಕೆ ರಾಮರಾಜನ್ ತಿಳಿಸಿದ್ದಾರೆ.
ಇಲಾಖಾ ಅಧಿಕಾರಿಗಳು ವಿಚಾರಣೆಯನ್ನು ನಡೆಸುತ್ತಿದ್ದಾರೆ ಅನಂತರ ಆರೋಪಿಗಳ ವಿರುದ್ಧ ಕಾನೂನಿನ ಪ್ರಕಾರ ಸಂಪೂರ್ಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಪಿ ಸುದ್ಧಿಗಾರರಿಗೆ ಮಾಹಿತಿಯನ್ನು ನೀಡಿದರು. ಆದರೆ ವಶಪಡಿಸಿಕೊಂಡ ಗಾಂಜಾ ಮತ್ತು ಅದರ ಮೌಲ್ಯದ ವಿವರಗಳನ್ನು ಹಂಚಿಕೊಳ್ಳಲು ಡಿಸಿಪಿ ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಅಮಾನತುಗೊಂಡಿರುವ ಏಳು ಪೋಲಿಸ್ ಆರೋಪಿಗಳು ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್ಐ ಕರಿಯಪ್ಪ ಗೌಡರ್, ಹೆಡ್ ಕಾನ್ಸ್ಟೇಬಲ್ಗಳಾದ ವಿಕ್ರಮ್ ಪಾಟೀಲ್, ನಾಗರಾಜ್ ಮತ್ತು ಶಿವಕುಮಾರ್ ಸೇರಿ ಐವರು ಎಪಿಎಂಸಿ ಪೊಲೀಸ್ ಠಾಣೆಗೆ ಸೇರಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ದಿಲ್ಷಾದ್ ಮತ್ತು ಹೆಡ್ ಕಾನ್ಸ್ಟೇಬಲ್ ಹೊನ್ನಪ್ಪನವರ್ – ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದರು ಎಂದು ತಿಳಿದುಬಂದಿದೆ.