ಚಿತ್ರದುರ್ಗ: ದೇಶದಾದ್ಯಂತ ಹೆಚ್ಚಾಗುತ್ತಿರುವ ಮತಾಂತರವನ್ನು ತಡೆಯಲು ನಾಡಿನ ಅನೇಕ ಮಠಾಧೀಶರು ಒಗ್ಗಟ್ಟಾಗಿ ಸಂಕಲ್ಪ ಮಾಡಿದ್ದಾರೆ.
ಮುರುಘ ರಾಜೇಂದ್ರ ಬೃಹನ್ಮಠದ ಶ್ರೀ ಶಿರಸಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನಡೆದ ಪರಿವರ್ತನ ಪರ ಧರ್ಮ ಸಂಸತ್ ಸಭೆಯಲ್ಲಿ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಮಠಾಧೀಶರು ಮತಾಂತರ ತಡೆಯಲು ಸಂಕಲ್ಪವನ್ನು ಮಾಡಿದರು.
ಇಂದು ರಾಷ್ಟ್ರ ಮಟ್ಟದಲ್ಲಿ ಮತಾಂತರ ಕಾರ್ಯ ಮುಂದುವರೆದಿದೆ, ಮೊದಲು ಜನರು ಅತಿಯಾದ ಶೋಷಣೆ ಹಾಗೂ ಕಡು ಬಡತನದಿಂದ ಮತಾಂತರ ಆಗುತ್ತಿದ್ದರು ಆದರೆ ಇಂದು ಸರ್ಕಾರ ಎಲ್ಲಾ ಜನರಿಗೂ ಸಹ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿದೆ ಆದರೂ ಸಹ ಜನರು ಮತಾಂತರಗೊಳ್ಳುತ್ತಿದ್ದಾರೆ. ರಾಷ್ಟ್ರ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ತಮ್ಮ ಕ್ರೈಸ್ತ ಜನಾಂಗದವರು, ಮುಸ್ಲಿಂ ಸಮುದಾಯದವರು ತಮ್ಮ ಧರ್ಮವನ್ನು ಬೆಳೆಸಿಕೊಳ್ಳಲು ಈ ರೀತಿಯ ಮತಾಂತರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಅದನ್ನು ತಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಮತಾಂತರ ತಡೆ ಉದ್ದೇಶಿಸಿ “ದೇಶದಲ್ಲಿ ಹಲವು ಕಡೆ ಲಿಂಗಾಯುತ ಜನರು ಮತಾಂತರ ಆಗುತ್ತಿರುವುದು ಅಸಮಾಧಾನ ತಂದಿದೆ, ಎಲ್ಲಾ ಜಾತಿ ವರ್ಗಗಳ ಧಾರ್ಮಿಕರಲ್ಲಿ ರಾಜಕೀಯ ಮತ್ತು ಧಾರ್ಮಿಕ ಶಕ್ತಿ ಬಂದಿದೆ, ಅಸ್ಪೃಶ್ಯತೆ ಮತ್ತು ಮತಾಂತರ ತಡೆಯುವ ಕಡೆ ನಾವು ಸಾಗಬೇಕು, ರಾಷ್ಟ್ರ ಮಟ್ಟದಲ್ಲಿ ಮತಾಂತರ ತಡೆ ಸಂದೇಶ ತಲುಪಿ ನಮ್ಮ ಸಮಾಜವನ್ನು ಉಳಿಸಲು ನಾವು ಒಗ್ಗಟ್ಟಾಗಿ ನಿಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ತಿಪಟೂರು ಶ್ರೀ ರುದ್ರಮುನಿ, ಶ್ರೀ ಬಸವ ಭೃಂಗೇಶ್ವರ, ಶ್ರೀ ಬಸವ ಹರಳಯ್ಯ, ದೆಹಲಿಯ ಮಹಾಂತ ಸ್ವಾಮಿಗಳು ಮಾತನಾಡಿದರು. ಬೆಂಗಳೂರು ಕೊಳದ ಮಠ ಶ್ರೀ ಶಾಂತವೀರ , ಹೊಸದುರ್ಗದ ಡಾ. ಶಾಂತವೀರ, ಶ್ರೀ ವೇಮನಾನಂದ, ಶ್ರೀ ಬಸವ ಕುಮಾರ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಸೇರಿದಂತೆ ನೂರಾರು ಸ್ವಾಮಿಗಳು ಭಾಗವಹಿಸಿದ್ದರು.