Tuesday, November 28, 2023
Homeರಾಜಕೀಯನಾನು ಎಷ್ಟು ಮೇಲೆ ಹೋದರು ನಿಮ್ಮ ಬಸಣ್ಣನೇ : ಬೊಮ್ಮಾಯಿ ಮಾತನ್ನು ಕೇಳಿ ಪುಳಕಿತರಾದ ಅಭಿಮಾನಿಗಳು

ನಾನು ಎಷ್ಟು ಮೇಲೆ ಹೋದರು ನಿಮ್ಮ ಬಸಣ್ಣನೇ : ಬೊಮ್ಮಾಯಿ ಮಾತನ್ನು ಕೇಳಿ ಪುಳಕಿತರಾದ ಅಭಿಮಾನಿಗಳು

ಬೆಂಗಳೂರು: ನಾನು ಎಷ್ಟೇ ಮೇಲೆ ಹೋದರೂ ನಾನು ನಿಮ್ಮ ಬಸಣ್ಣನೇ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಾತು ಕೇಳಿದ ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದಿಂದ ಬಂದಿದ್ದ ಅವರ ಅಭಿಮಾನಿಗಳು ಪುಳಕಿತರಾದರು.

ಮುಖ್ಯಮಂತ್ರಿಯಾಗಿ ಬೊಮ್ಮಾಯಿ ನೇಮಕಗೊಳ್ಳುತ್ತಿದ್ದಂತೆ ಅವರ ಸ್ವಕ್ಷೇತ್ರ ಶಿಗ್ಗಾವಿ ಮತ್ತು ಹಾವೇರಿ ಜಿಲ್ಲೆಯಿಂದ ಬಂದಿದ್ದ ಅಭಿಮಾನಿಗಳು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬುಧವಾರ ಮಧ್ಯಾಹ್ನ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಬೊಮ್ಮಾಯಿಯವರು ವೇದಿಕೆಗೆ ಬರುತ್ತಿದ್ದಂತೆ ಹಾವೇರಿ ಹುಲಿಗೆ ಜಯವಾಗಲಿ ಎಂದು ಹರ್ಷೋದ್ಗಾರ ಮಾಡಿದರು.

ಈ ಸಮಾರಂಭದ ವೇಳೆ ಮಾತನಾಡಿದ ಬೊಮ್ಮಾಯಿ ಅವರು, ಶಿಗ್ಗಾವಿ ಕ್ಷೇತ್ರದ ಪ್ರತಿ ಹಳ್ಳಿಯ ಮನೆಗಳಲ್ಲಿ ನಾನಿದ್ದೇನೆ. ಸ್ಥಾನದ ಬಲಕ್ಕಿಂತ ಸೇವೆ ಮಾಡುವುದು ಬಹಳ ಮುಖ್ಯವಾಗಿದೆ, ನಮ್ಮ ಜಿಲ್ಲೆ ಮತ್ತು ಕ್ಷೇತ್ರದ ಜನತೆಗೆ ವಿಶೇಷ ವ್ಯವಸ್ಥೆ ಮಾಡುತ್ತೇನೆ. ಶಿಗ್ಗಾವಿಯನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ. ರಾಜ್ಯದ ಅಭಿವೃದ್ಧಿಯ ಜತೆಗೆ ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನನಗೆ ಶಕ್ತಿ ತುಂಬಿದವರು ನೀವು. ನಿಮ್ಮ ಬೆಂಬಲದಲ್ಲಿ ನನಗೆ ಎಷ್ಟು ಶಕ್ತಿ ಇದೆ ಎನ್ನುವುದೂ ನನಗೆ ಗೊತ್ತಿದೆ. ನನಗೆ ಹೆಗಲಿಗೆ ಹೆಗಲು ಕೊಟ್ಟಿದ್ದೀರಿ. ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಸಾಧನೆ ಮಾಡಿದ್ದೀರಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ನಿಮ್ಮನ್ನು ಪಡೆದುಕೊಂಡಿರುವುದು ನನ್ನ ಪೂರ್ವಜನ್ಮದ ಪುಣ್ಯ. ನಿಮ್ಮನ್ನೆಲ್ಲ ನೋಡಿದಾಗ ಅತ್ಮವಿಶ್ವಾಸ ಹೆಚ್ಚಾಗುತ್ತದೆ. ಆದಮ್ಯ ಶಕ್ತಿ ಬರುತ್ತದೆ. ನಿಮ್ಮೀ ಶಕ್ತಿ- ಬೆಂಬಲದಿoದ ಮುಂದೆ ಇಟ್ಟ ಹೆಜ್ಜೆಯನ್ನು ನಾನು ಯಾವತ್ತೂ ಹಿಂದೆ ಇಟ್ಟಿಲ್ಲ ಎಂದು ಹೇಳಿದರು.

ನನಗೆ ಹಿರಿಯರಾದ ಉದಾಸಿಯವರು ನೆನಪಿಗೆ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಅವರ ಸೇವೆ ಅಪಾರವಾಗಿದೆ. ಇವತ್ತು ಅವರು ನಮ್ಮ ನಡುವೆ ಇಲ್ಲ. ಅವರು ಎಲ್ಲೇ ಇದ್ದರೂ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಎಂದು ಬೊಮ್ಮಾಯಿಯವರು ಹೇಳಿ ಬಾವುಕರಾದರು.

ಎಲ್ಲ ವರ್ಗದ ಜನತೆಗೆ ನ್ಯಾಯ ಒದಗಿಸಲು ಬದ್ದನಾಗುತ್ತೇನೆ. ಸ್ವಲ್ಪ ತಾಳ್ಮೆಯೂ ಬೇಕು, ಸಹಕಾರವೂ ಬೇಕು. ನಿಮಗೋಸ್ಕರ ವಿಶೇಷ ಸಮಾರಂಭವನ್ನು ಏರ್ಪಡಿಸುತ್ತೇನೆ. ನಾನು ಎಷ್ಟೇ ಮೇಲೆ ಹೋದರೂ ನಾನು ನಿಮ್ಮ ಬಸಣ್ಣನೇ. ನೀವೂ ಕುಳಿತಿರಿ. ನಾನೇ ಅಲ್ಲಿಗೆ ಬರುತ್ತೇನೆ ಎಂದು ಹೇಳಿದ ಅವರು ಜನರು ಕುಳಿತಲ್ಲಿಗೇ ಹೋಗಿ ಅಭಿನಂದನೆ ಸ್ವೀಕರಿಸಿದರು.

Most Popular

Recent Comments