ಬೆಂಗಳೂರು : ರಾಜ್ಯದಲ್ಲಿ ಕಳೆದೆರೆಡು ವಾರದಿಂದ ಸದ್ದುಮಾಡುತ್ತಿರುವ ಕರ್ನಾಟಕ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಬಿಜೆಪಿ ಹೈಕಮಾಂಡ್ಗೆ ನನ್ನ ಮೇಲೆ ಎಲ್ಲಿಯವರೆಗೆ ವಿಶ್ವಾಸವಿರುತ್ತದೆಯೂ ಅಲ್ಲಿಯವರೆಗೆ ಸಿಎಂ ಆಗಿ ಮುಂದುವರೆಯುತ್ತೇನೆ. ಯಾವ ದಿನ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕೆಂದು ಸೂಚಿಸುತ್ತಾರೋ ಅಂದು ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡುತ್ತೇನೆ. ರಾಜಿನಾಮೆ ನೀಡಿದ ಬಳಿಕವೂ ಜನತೆಯ ಪರ ಹಾಗು ಪಕ್ಷದ ಒಳಿತಿಗಾಗಿ ಕೆಲಸ ಮಾಡುತ್ತೇನೆ. ಈ ವಿಷಯದ ಬಗ್ಗೆ ನನಗೆ ಯಾವುದೇ ಗೊಂದಲ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಪರ್ಯಾಯ ನಾಯಕರು ರಾಜ್ಯದಲ್ಲಿ ಇಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ, ಇಲ್ಲಿ ಯಾರೂ ಶಾಶ್ವತವಲ್ಲ. ಕೇಂದ್ರ ಹಾಗು ರಾಜ್ಯ ಎರಡರಲ್ಲೂ ಪರ್ಯಾಯ ನಾಯಕರು ಇರುತ್ತಾರೆ ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಹೈಕಮಾಂಡ್ ಹೇಳಿದಲ್ಲಿ ಯಾವುದೇ ಗೊಂದಲವಿಲ್ಲದೆ ರಾಜಿನಾಮೆ ನೀಡಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.