ನವದೆಹಲಿ : ಈ ಬಾರಿ ಅಡಿಕೆಗೆ ಉತ್ತಮ ಬೆಲೆ ಬಂದಿದ್ದು, ಅಡಿಕೆ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುವ ಕುಟುಂಬಗಳು ಸಂತಸದಲ್ಲಿವೆ.ಅಡಿಕೆ ಬೆಳೆಯನ್ನು ಬ್ಯಾನ್ ಮಾಡುವಂತೆ ಪ್ರಧಾನಿಗೆ ಪತ್ರ ಬರೆದ ಜಾರ್ಖಂಡ್ ನ ಬಿಜೆಪಿ ಸಂಸದನ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಶ್ರೀ ಸುಧಾಕರ್ ಎಸ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಅಡಿಕೆಯು ಮಲೆನಾಡಿಗರ ಮುಖ್ಯವಾದ ಬೆಳೆಯಾಗಿದೆ. ಇದನ್ನು ನಿಷೇಧ ಮಾಡಲು ಮುಂದಾಗುತ್ತಿರುವ ಎಲ್ಲರ ವಿರುದ್ಧವೂ ನಮಗೆ ಆಕ್ರೋಶವಿದೆ. ರೈತರ ಕಷ್ಟಗಳನ್ನು ನೀಗಿಸುವ ಕೆಲಸವನ್ನು ಮೊದಲು ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗ ಮಾಡಬೇಕು. ಒಬ್ಬ ಜವಾಬ್ದಾರಿಯುತ ಸಂಸದರಾಗಿ ದೇಶದ ಪ್ರಾತಿನಿಧ್ಯ ಬೆಳೆಯಾದ ಅಡಿಕೆಯನ್ನು ನಿಷೇಧ ಹೇರಲು ಮುಂದಾಗುವುದು ಸಮಂಜಸವಲ್ಲ ಎಂದು ಸುಧಾಕರ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ
ಆದರೆ ಅಡಿಕೆಯನ್ನು ಬ್ಯಾನ್ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾರ್ಖಂಡ್ ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಒತ್ತಾಯಿಸಿದ್ದಾರೆ. ಅಡಿಕೆ ಯಿಂದ ಕ್ಯಾನ್ಸರ್ ಬರುತ್ತದೆ ಜನರ ಜೀವನಕ್ಕೆ ಅಡಿಕೆ ಮಾರಕವಾಗಿದೆ. ದೇಶದ ಬಹುಪಾಲು ಜನರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಇದು ದೇಶಕ್ಕೆ ಮುಂದಿನ ದಿನಗಳಲ್ಲಿ ಮಾರಕವಾಗಲಿದೆ ಎಂದು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ದೇಶದಲ್ಲಿ ಅತೀ ಹೆಚ್ಚಿನ ಜನರು ಪಾನ್ ಮಸಾಲ ಬಳಸುತ್ತಾರೆ, ಇದರಿಂದ ಅವರು ಮುಂದಿನ ದಿನಗಳಲ್ಲಿ ಹಲವಾರು ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದೆ. ಜನರ ಒಳಿತಿಗಾಗಿ ಅಡಿಕೆಯನ್ನು ನಿಷೇಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಕೋರಿದ್ದಾರೆ.
ಅಡಕೆಯ ಕುರಿತಾಗಿ ಸಾಕಷ್ಟು ಪ್ರಯೋಗಗಳು ನಡೆಯುತ್ತಲೇ ಇದೆ, ಅಡಿಕೆಯಿಂದ ಉಂಟಾಗುವ ಲಾಭಗಳ ಕುರಿತಾಗಿಯೂ ಸಹ ಬಹಳಷ್ಟು ವರದಿಗಳು ಮೂಡಿ ಬಂದಿವೆ. ಒಂದೆಡೆ ಅಡಿಕೆ ಬೆಳೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ತಜ್ಞರು ವಿವಿಧ ರೀತಿಯ ಪ್ರಯೋಗಗಳನ್ನು ಕೈಗೆತ್ತಿಕೊಂಡರೆ ಇನ್ನೊಂದೆಡೆ ಈ ರೀತಿಯಾದ ರಾಜಕೀಯ ನಾಯಕರ ಹೇಳಿಕೆಗಳು ರೈತರ ಪಾಲಿಗೆ ಅತೀವ ನೋವುಂಟು ಮಾಡುತ್ತಿದೆ.
ರೈತಾಪಿ ವರ್ಗದ ಜೀವನಾಡಿ ಬೆಳೆಯಾದ
ಅಡಿಕೆಯನ್ನು ನಿಷೇಧಿಸುವುದು ಮೂರ್ಖತನವಾಗಿದೆ. ಮಲೆನಾಡು ಭಾಗದ ಪ್ರಮುಖ ಬೆಳೆಯಾದ ಅಡಿಕೆಯ ನಿಷೇಧದ ಕುರಿತಾಗಿ ಸಂಸದರು ನೀಡಿರುವ ಹೇಳಿಕೆ ಖಂಡನಾರ್ಹ.– ಸುಧಾಕರ್ ಎಸ್ ಶೆಟ್ಟಿ
ರಾಜ್ಯ ಉಪಾಧ್ಯಕ್ಷರು, ಜಾತ್ಯಾತೀತ ಜನತಾದಳ.