ಬೆಂಗಳೂರು: ಏ.17 ರಂದು ನಡೆಯುವ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸರ್ಕಾರ ಕೊರೋನಾ ಮಾರ್ಗಸೂಚಿಯನ್ನು ಹೊರಡಿಸಿದೆ. ರಾಜ್ಯದಲ್ಲಿ ಮತ್ತೊಮ್ಮೆ ಕೊರೋನ ಕೇಸ್ ಗಳು ಹೆಚ್ಚಾಗುತ್ತಿದ್ದು ಚುನಾವಣಾ ಪ್ರಚಾರಕ್ಕೆ ತೆರಳುವ ರಾಜಕೀಯ ಪಕ್ಷದ ಮುಖಂಡರಿಗೆ ಬಿಗ್ ಶಾಕ್ ಒಂದನ್ನು ನೀಡಿದ್ದು ಕೇವಲ 5 ಜನರಿಗಷ್ಟೇ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅವಕಾಶವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ದಿನಕಳೆಯುತ್ತಿದ್ದಂತೆಯೇ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದೆ, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ಆರೋಗ್ಯ ಇಲಾಖೆಯು ಕೊರೋನಾ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಪ್ರತೀಯೊಬ್ಬರೂ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಸಿಬ್ಬಂದಿ ಮತ್ತು ಮತದಾರರ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು ಎಂದು ಸೂಚಿಸಲಾಗಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ತಿ ಸೇರಿ ಕೇವಲ ಎರಡು ಜನರಿಗಷ್ಟೇ ಪ್ರವೇಶ ನೀಡಲಾಗುತ್ತದೆ ಅಲ್ಲದೆ ಎರಡು ವಾಹನಗಳಿಗಷ್ಟೇ ಅವಕಾಶ ನೀಡಿದ್ದಾರೆ.
ಉಳಿದಂತೆ ನಾಮಪತ್ರದ ಫಾರಂ ಡೌನ್ ಲೋಡ್, ಅಫಿಡವಿಟ್, ಭದ್ರತಾ ಠೇವಣಿ ಮುಂತಾದವನ್ನು ಆನ್’ಲೈನ್ ಮೂಲಕವೇ ಸಲ್ಲಿಸಬಹುದಾಗಿದೆ. ಕೋವಿಡ್ ಪೀಡಿತರು, ಲಕ್ಷಣ ಇದ್ದವರು, ಕಂಟೈನ್ಮೆಂಟ್ ವಲಯದವರು, ಹೋಮ್ ಐಸೋಲೇಷನ್ ನಲ್ಲಿದ್ದವರಿಗೆ ಅವಕಾಶ ನೀಡಬೇಕು. ಕೋವಿಡ್ ರೋಗಿಗಳು ಪಿಪಿಇ ಕಿಟ್ ಧರಿಸಿ ನಿಗದಿತ ಆ್ಯಂಬುಲೆನ್ಸ್ ನಲ್ಲಿ ಬಂದು ಮತದಾನ ಮಾಡಬೇಕು ಎಂದು ಎಂದು ಪ್ರಕಟಣೆ ತಿಳಿಸೊದೆ.